ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಎದೆನೋವು ಕಾಣಿಸಿಕೊಂಡ ಕಾರಣ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಗಂಗೂಲಿ ಕಳೆದ ಕೆಲದಿನಗಳ ಹಿಂದೆ ಎದೆ ನೋವಿಗಾಗಿ ಚಿಕಿತ್ಸೆ ಪಡೆದಿದ್ದರು. ಆದಾದ ಬಳಿಕ ಮತ್ತೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಜನವರಿ 27 ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ನಂತರ ಆ್ಯಂಜಿಯೋಪ್ಲಾಸ್ಟಿ ನಡೆಸಿ ಎರಡು ಸ್ಟಂಟ್ ಆಳವಡಿಸಿದ್ದಾರೆ.
ಹೃದಯನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಗಂಗೂಲಿಯವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಈ ಮೂಲಕ ಕಳೆದ 20 ದಿನಗಳ ಅಂತರದಲ್ಲಿ 2 ಬಾರಿ ಆಸ್ಪತ್ರೆಯಲ್ಲಿ ಎದೆ ನೋವಿಗಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳಲ್ಲಿ ಸಹಜ ಜೀವನ ಕ್ರಮಕ್ಕೆ ಮರಳುತ್ತಾರೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ಖ್ಯಾತ ತಜ್ಞ ವೈದ್ಯರಾದ ಡಾ.ದೇವಿ ಶೆಟ್ಟಿಯವರನ್ನು ಒಳಗೊಂಡ ವೈದ್ಯರ ತಂಡ ಗಂಗೂಲಿಯವರ ಆರೋಗ್ಯದ ಮೇಲೆ ನಿಗಾ ವಹಿಸಿತ್ತು.