ಚಿಕ್ಕಬಳ್ಳಾಪುರ: ಗಾಂಜಾ ಸಂಗ್ರಹ ಮಾಡಿದ್ದ ಮನೆ ಮೇಲೆ ದಾಳಿ ನಡೆಸಿದ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ಬರೋಬ್ಬರಿ 15 ಗಾಂಜಾ ಪೊಟ್ಟಣಗಳನ್ನು ವಶಕ್ಕೆ ಪಡೆದಿದ್ದಾರೆ.
ಡಿವೈಎಸ್ಪಿ ರವಿಶಂಕರ್, ಸಿಪಿಐ ರವಿ ಹಾಗೂ ಪಿಎಸ್ ಚಂದ್ರಕಲಾ ಜಿಲ್ಲೆಯ ಗೌರಿಬಿದನೂರು ನಗರದ ನೆಹರೂಜಿ ಕಾಲೋನಿಯ ಕಬಾಬ್ ವ್ಯಾಪಾರಿ ಫೈರೋಜ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಸಂಗ್ರಹ ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ನನ್ನ ತಮ್ಮ ಫಿರ್ದೋಸ್ ಖಾನ್ ಈ ಗಾಂಜಾವನ್ನ ಮನೆಯಲ್ಲಿ ಇಟ್ಟಿದ್ದಾನೆ. ಈ ಬಗ್ಗೆ ನನಗೇನು ಗೊತ್ತಿಲ್ಲ ಅಂತ ಫೈರೋಜ್ ಖಾನ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಇತ್ತ ಮನೆ ಮೇಲೆ ಪೊಲೀಸರು ಮಾಡಿರುವ ಬಗ್ಗೆ ತಿಳಿದ ಫಿರ್ದೋಸ್ ಖಾನ್ ತಲೆಮರೆಸಿಕೊಂಡಿದ್ದಾನೆ. ಫಿರ್ದೋಸ್ ಖಾನ್ ಈ ಹಿಂದೆಯೂ ಗಾಂಜಾ ಸಾಗಾಟ, ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಬೆಂಗಳೂರು ಹಾಗೂ ತುಮಕೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದೂರುಗಳು ದಾಖಲಾಗಿದ್ದವು. ಇದಲ್ಲದೇ ಗಾಂಜಾ ಸಾಗಾಟ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿ ಹೊರಬಂದಿದ್ದ ಎನ್ನಲಾಗಿದೆ. ಈಗ ಮತ್ತೆ ಅದೇ ಚಾಳಿ ಮುಂದುವರಿಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.