ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟ ತಮ್ಮ ಕ್ಷೇತ್ರದ ಕುಟುಂಬದ ಸದಸ್ಯರಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ವಿತರಣೆ ಮಾಡಿದರು.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಿರೇಕೋಣತಿ ಗ್ರಾಮದ ಬಸನಗೌಡ ಕವಲಿ ಮತ್ತು ನಿಟ್ಟೂರು ಗ್ರಾಮದ ಮಲ್ಲಿಕಾರ್ಜುನ ಬಂಗಾರಿ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿದರು. ನಂತರ ಹಂಸಭಾವಿ ಗ್ರಾಮದ ಶಿವಾನಂದಯ್ಯ, ರಮೀಜಾ ಬಾಯಿ, ದೊಡ್ಡಮನಿ ಹಾಗೂ ಯೋಗಿಕೊಪ್ಪ ಗ್ರಾಮದ ಬಸನಗೌಡ ಪಾಟೀಲ್ ಹಾಗೂ ವಡೇನಪುರದ ಪಕ್ಕೀರಪ್ಪ ಶಿವಣ್ಣನವರ್ ಮತ್ತು ಅರಳಿಕಟ್ಟಿ ಗ್ರಾಮದ ಗುಡ್ಡಪ್ಪ ಎಲೆದಳ್ಳಿ ಕುಟುಂಬಕ್ಕೆ 50 ಸಾವಿರ ವೈಯಕ್ತಿಕ ಪರಿಹಾರ ನೀಡಿದರು.
ಕೊರೊನಾ ಸೋಂಕಿನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ವಿತರಿಸಿ, ಅವರ ಆರೋಗ್ಯ ವಿಚಾರಿಸಿದರು. ನೀವು ಸಹ ಯಾವುದೇ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಕುಟುಂಬ ಸದಸ್ಯರಿಗೆ ಸಲಹೆ ನೀಡಿದರು. ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ 18 ಜನರಿಗೆ ಪರಿಹಾರವನ್ನು ಸಚಿವ ಬಿ.ಸಿ ಪಾಟೀಲ್ ವಿತರಿಸಲಿದ್ದಾರೆ.