– ವ್ಯಕ್ತಿ ಸತ್ತು 8 ದಿನದ ಬಳಿಕ ಸೀಲ್ಡೌನ್ಗೆ ಮುಂದಾದ ಪಾಲಿಕೆ ಸಿಬ್ಬಂದಿ
– ಅಧಿಕಾರಿ ಮಾತು ಕೇಳಿ ಕುಟುಂಬಸ್ಥರು ಕಂಗಾಲು
ಧಾರವಾಡ: ಕೊರೊನಾದಿಂದ ವ್ಯಕ್ತಿ ಸತ್ತು ಅಂತ್ಯಸಂಸ್ಕಾರ ನಡೆದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಕರೆ ಮಾಡಿ ಆರಾಮಾಗಿದ್ದೀರಾ ಎಂದು ಕೇಳಿದ್ದಾರೆ. ಇದರಿಂದಾಗಿ ಕುಟುಂಬಸ್ಥರು ಒಂದು ಕ್ಷಣ ದಂಗಾಗಿದ್ದಾರೆ.
ನಗರದ ಮೃತ್ಯುಂಜಯ ನಗರ ಕೊಟ್ಟಣದ ಓಣಿಯ ವ್ಯಕ್ತಿಗೆ ಜುಲೈ 22 ರಂದು ಅನಾರೋಗ್ಯ ಕಾಡಿತ್ತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರಗೆ ದಾಖಲಿಸಿದಾಗ ಕೊರೊನಾ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಇದಾದ ಎರರು ದಿನಕ್ಕೆ ಅಂದರೆ ಜುಲೈ 24ರಂದು ವ್ಯಕ್ತಿ ನಿಧನರಾಗಿದ್ದಾರೆ. ನಂತರ ಕಿಮ್ಸ್ ಸಿಬ್ಬಂದಿ ಮನೆಯವರಿಗೆ ಕರೆ ಮಾಡಿ ನಿಧನರಾದ ಸುದ್ದಿ ತಿಳಿಸಿದ ಬಳಿಕ ಅಂತ್ಯಸಂಸ್ಕಾರವೂ ನಡೆದಿದೆ.
ಈ ಎಲ್ಲ ಪ್ರಕ್ರಿಯೆ ನಡೆದ ಬಳಿಕ ಕಿಮ್ಸ್ ಸಿಬ್ಬಂದಿ ಕರೆ ಮಾಡಿ ಆರಾಮಾಗಿದ್ದಾರಾ ಎಂದು ಕೇಳಿದ್ದಾರಂತೆ. ಆಗ ಮನೆ ಸದಸ್ಯರು ಅವರು ಆಗಲೇ ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮತ್ತೊಮ್ಮೆ ಕರೆ ಮಾಡಿದ್ದು, ಆಗಲೂ ಮನೆಯವರು ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ, ವ್ಯಕ್ತಿ ಸಾವನ್ನಪ್ಪಿ 8 ದಿನ ಕಳೆದರೂ ಪಾಲಿಕೆ ಸಿಬ್ಬಂದಿ ಈಗ ವ್ಯಕ್ತಿಯ ಮನೆ ಸೀಲ್ಡೌನ್ ಮಾಡಲು ಬಂದಿದ್ದಾರೆ. ಈ ವೇಳೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.