ಬೆಂಗಳೂರು: ವಿರೂಪಗೊಳಿಸಿದ ಹಾಗೂ ಮಾರ್ಪಾಡಿತ ಸೈಲೆನ್ಸರ್ ಹೊಂದಿದ ವಾಹನಗಳ ವಿರುದ್ಧ ಹಾಸನ-ನೆಲಮಂಗಲ ಟೋಲ್ ಗೇಟ್ ಬಳಿ ಸಾರಿಗೆ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿ 300 ಹೈಎಂಡ್ ಬೈಕ್ ಹಾಗೂ 60ಕ್ಕೂ ಹೆಚ್ಚು ಕಾರುಗಳ ಪರಿಶೀಲನೆ ನಡೆಸಿದರು.
ಸೈಲೆನ್ಸರ್ ವಿರೂಪಗೊಳಿಸಿ ವಾರಾಂತ್ಯಗಳಲ್ಲಿ ಜಾಲಿ ರೈಡ್ಗೆ ಮಾತ್ರ ಹಲವಾರು ವಾಹನಗಳನ್ನು ಬಹಳಸಲಾಗುತ್ತಿರುವ ಅಂಶ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದನ್ನು ತಡೆಗಟ್ಟುವ ಹಾಗೂ ಪತ್ತೆಹಚ್ಚುವ ನಿಟ್ಟಿನಲ್ಲಿ ಇಂದು ಕಾರ್ಯಾಚರಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಬೈಕುಗಳು ಹಾಗೂ 60ಕ್ಕೂ ಹೆಚ್ಚು ಕಾರುಗಳನ್ನು ತಪಾಸಣೆಗೊಳಿಸಲಾಯಿತು. ಈ ವೇಳೆ ಸೈಲೆನ್ಸರ್ ವಿರೂಪಗೊಳಿಸದ್ದ 40 ಕ್ಕೂ ಹೆಚ್ಚು ವಾಹನಗಳ ಮೇಲೆ ದೂರು ದಾಖಲಿಸಿಕೊಂಡಿರುವ ಸಾರಿಗೆ ಅಧಿಕಾರಿಗಳು ಅವುಗಳ ಆರ್ಸಿ ರದ್ದುಗೊಳಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಮೋಟಾರ್ ವಾಹನ ನಿರೀಕ್ಷಕ ಸುಧಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ತಪ್ಪಲಲ್ಲಿ ರಾಜಾರೋಷವಾಗಿ ಪ್ರವಾಸಿಗರಿಂದ ಹುಕ್ಕಾ ಸೇವನೆ
ಸಾರಿಗೆ ಇಲಾಖೆ ಅಪರ ಮುಖ್ಯ ಆಯುಕ್ತರಾದ ನರೇಂದ್ರ ಹೋಳ್ಕರ್ ಹಾಗೂ ಜಂಟಿ ಸಾರಿಗೆ ಆಯುಕ್ತರಾದ ಹಾಲಪ್ಪಸ್ವಾಮಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್ ರಾಜಣ್ಣ, ಮೋಟಾರ್ ವಾಹನ ನೀರೀಕ್ಷಕರುಗಳಾದ ರಂಜಿತ್ (ದೇವನಹಳ್ಳಿ ಭಾಗದಲ್ಲಿ) ಚೇತನ್, ಸುಧಾಕರ್, ಸುಂದರ್ ಮತ್ತು ರಂಜಿತ್ (ನೆಲಮಂಗಲ-ಹಾಸನ ಟೋಲ್ಗೇಟ್) ಅವರನ್ನೊಳಗೊಂಡ ಮೂರು ತಂಡ ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿತು.