ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸೇತುವೆ ನಿರ್ಮಿಸಬೇಕೆ ಹೊರತು ಗೋಡೆಗಳನ್ನಲ್ಲ ಎಂದು ಟ್ವೀಟ್ ಮಾಡುವ ಮೂಲಕವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಮುಂದುವರಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ಬಂದು ರೈತರು ಕೈಜೋಡಿಸುತ್ತಿದ್ದಾರೆ. ಈ ವಿಚಾರವಾಗಿ ರಾಹುಲ್ ಗಾಂಧಿ ಸರ್ಕಾರ ವಿರುದ್ಧ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸರ್ಕಾರ ಸೇತುವೆಗಳನ್ನು ಕಟ್ಟಿಸಿ, ಗೋಡೆಗಳನ್ನಲ್ಲ ಎಂದು ಒಂದೇ ಸಾಲಿನಲ್ಲಿ ಬರೆದುಕೊಂಡು ರೈತರ ಹೋರಾಟ ತಡೆಯಲು ನಿರ್ಮಿತವಾದ ಕೆಲವು ತಡೆಗೋಡೆಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಚಾಟಿ ಬೀಸಿದ್ದಾರೆ.
GOI,
Build bridges, not walls! pic.twitter.com/C7gXKsUJAi
— Rahul Gandhi (@RahulGandhi) February 2, 2021
ಘಾಜಿಪುರ್ ಗಡಿಯಲ್ಲಿ ನೂರಾರು ಪೊಲೀಸರು ಸೈನಿಕರಂತೆ ನಿಂತಿದ್ದಾರೆ. ಹತ್ತಾರು ಅಡಿಗಳಷ್ಟು ದೂರ ಸಿಮೆಂಟ್ ಬ್ಯಾರಿಕೇಡ್ಗಳನ್ನು ಜೋಡಿಸಲಾಗಿದೆ. ಬ್ಯಾರಿಕೇಡ್ನ ಮಧ್ಯೆ ಸಿಮೆಂಟ್ ಹಾಕಲಾಗಿದೆ. ಕಬ್ಬಿಣದ ಬ್ಯಾರಿಕೇಡ್ಗಳನ್ನು ಹಾಕಿ ರಾಡುಗಳನ್ನು ಹಿಡಿದು ನಿಂತಿದ್ದಾರೆ. ರೈತರ ಪ್ರತಿಭಟನೆ ತೀವ್ರವಾಗದಂತೆ ತಡೆಯಲು ಹಾಗೂ ದೆಹಲಿಯನ್ನು ಪ್ರವೇಶಿಸದಂತೆ ತಡೆಯಲು ಪೊಲೀಸರು ಭದ್ರಕೋಟೆ ನಿರ್ಮಿಸಿರುವ ಫೋಟೋಗಳನ್ನು ರಾಹುಲ್ ಗಾಂಧಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.