ಆನೇಕಲ್(ಬೆಂಗಳೂರು): ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಅವಘಡವೊಂದು ನಡೆದಿದ್ದು, ಇಬ್ಬರು ಸಾವನ್ನಪ್ಪಿ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಆನೇಕಲ್ ನ ತಿರುಮಗೊಂಡನಹಳ್ಳಿ ಬಳಿಯ ಪಲೋಮಾ ಎಂಜಿನಿಯರಿಂಗ್ ಪ್ರೈ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ. ಆನಂದ್( 32) ಮತ್ತು ಜೇಮ್ಸ್( 25) ಮೃತ ವ್ಯಕ್ತಿಗಳಾಗಿದ್ದು, ಚಂದ್ರಶೇಖರ್ ಸ್ಥಿತಿ ಚಿಂತಾಜನಕವಾಗಿದೆ.
ಜೆಟ್ಟಿಂಗ್ ಮಿಷನ್ ಮೂಲಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಆಯತಪ್ಪಿ ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದ ಟೂಲ್ ತೆಗೆಯಲು ಇಳಿದ ಜೆಟ್ಟಿಂಗ್ ಮಿಷನ್ ಅಪರೇಟರ್ ಜೇಮ್ಸ್ ಮೊದಲು ಪ್ರಜ್ಞಾಹೀನರಾದರು. ಎಷ್ಟೊತ್ತಾದರು ಜೇಮ್ಸ್ ಮೇಲೆ ಬಾರದಿದ್ದಾಗ ಪಲೋಮಾ ಕಂಪನಿ ನೌಕರ ಆನಂದ್ ಟ್ಯಾಂಕ್ಗೆ ಇಳಿದಿದ್ದು, ಪ್ರಜ್ಞಾಹೀನಹೀನರಾದರು.
ಇಬ್ಬರನ್ನು ಹೊರತೆಗೆಯಲು ಟ್ಯಾಂಕ್ ಒಳಗೆ ಕಂಪನಿ ಎಚ್ಆರ್ ಸಿಬ್ಬಂದಿ ಚಂದ್ರಶೇಖರ್ ಇಳಿದಿದ್ದು ಅವರು ಕೂಡ ಪ್ರಜ್ಞಾಹೀನರಾದರು. ಕೊನೆಗೆ ಅಗ್ನಿಶಾಮಕ ದಳದಿಂದ ಮೂರು ಮಂದಿಯ ರಕ್ಷಣೆ ಮಾಡಲಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೇಮ್ಸ್ ಮತ್ತು ಆನಂದ್ ಮೃತಪಟ್ಟಿದ್ದಾರೆ. ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.