ಚಂಡೀಗಢ: ದೇಹ ವ್ಯಾಪಾರದ ದಂಧೆ ಮಾಡಲು ಒಪ್ಪದ್ದಕ್ಕೆ ಪತ್ನಿಯ ಮುಂದೆಯೇ ಅತ್ತಿಗೆಯನ್ನು ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಪಾಣಿಪತ್ ತಹ್ಸಿಲ್ ಕ್ಯಾಂಪ್ ಪ್ರದೇಶದ ಫತೇಪುರಿ ಚೌಕ್ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಕವಿತಾ ಮೃತ ಮಹಿಳೆ. ಆರೋಪಿ ಭಗತ್ ಅತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯ ಪತ್ನಿ ಪ್ರಿಯಾ ಮತ್ತು ಅತ್ತಿಗೆ ಕವಿತಾ ಇಬ್ಬರು ಔಷಧಿ ತರಲು ಮಾರುಕಟ್ಟೆಗೆ ಹೋಗಿದ್ದರು. ವಾಪಸ್ ಬರುವಾಗ ಊಟ ಮಾಡಲು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಆರೋಪಿ ಭಗತ್ ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿ, ಅತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಕವಿತಾಳನ್ನು ಸ್ಥಳದಲ್ಲಿದ್ದರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ.
ಆರೋಪಿಯ ಕುಟುಂಬಸ್ಥರು ದೇಹ ವ್ಯಾಪಾರದ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಯ ಪತ್ನಿ ಪ್ರಿಯಾ ಆರೋಪಿಸಿದ್ದಾರೆ. ಹೀಗಾಗಿ ಆರೋಪಿಯ ಕುಟುಂಬದವರು ಭಗತ್ ಪತ್ನಿ ಮತ್ತು ಅತ್ತಿಗೆ ಕವಿತಾಗೆ ದೇಹ ವ್ಯಾಪಾರ ಮಾಡುವಂತೆ ಒತ್ತಡ ಹಾಕುತ್ತಿದ್ದರು. ಆದರೆ ಪ್ರಿಯಾ ಮತ್ತು ಕವಿತಾ ಇಬ್ಬರಿಗೂ ಈ ಕೆಲಸವನ್ನು ಮಾಡಲು ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಮನೆ ಬಿಟ್ಟು ಬಂದು ಪ್ರತ್ಯೇಕ ಮನೆ ಮಾಡಿ ವಾಸಿಸಲು ಪ್ರಾರಂಭಿಸಿದ್ದರು.
ಮಕ್ಕಳಿಗೆ ಔಷಧಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ದಾರಿಯಲ್ಲಿ ಭಗತ್ ಬಂದು ಕವಿತಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಪರಾರಿಯಾಗಲು ಯತ್ನಿಸಿದ್ದು, ಆಗ ಜನರು ಆರೋಪಿ ಭಗತ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.