ನೆಲಮಂಗಲ: ಲಾಕ್ಡೌನ್ ಎಫೆಕ್ಟ್ ನಿಂದಾಗಿ ಟೊಮೇಟೋ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಾರಿ ಬೆಳೆ ಚೆನ್ನಾಗಿ ಇದ್ದರು ಕೂಡ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಬಂದಿರುವುದರಿಂದಾಗಿ ಮನನೊಂದು ಬೆಳೆಗೆ ಬೆಂಕಿ ಹಚ್ಚಿರುವ ಘಟನೆ ನೆಲಮಂಗಲದಲ್ಲಿ ವರದಿಯಾಗಿದೆ.
ಇದೀಗ ಟೊಮೇಟೋ ಕೆಜಿಗೆ 2 ರೂಪಾಯಿಯಂತೆ ರೈತರಿಂದ ಖರೀದಿಯಾದರೆ, 10 ರೂಪಾಯಿಗೆ ದಲ್ಲಾಳಿ ಮಾರುವಂತಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕಾಜಿಪಾಳ್ಯ ಹಾಗೂ ಕುತ್ತಿನಗೆರೆ ಗ್ರಾಮಸ್ಥರ ಕಥೆ ವ್ಯಥೆ ಇದ್ದಾಗಿದ್ದು, ಇದರಿಂದ ಮನನೊಂದು ಟೊಮೇಟೋ ಗಿಡಕ್ಕೆ ಬೆಂಕಿ ಹಚ್ಚುವ ಮೂಲಕ ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ ರೈತರು, ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಿಸುವವರಾದರೂ ನೇರವಾಗಿ ಟೊಮೇಟೋ ನಮ್ಮಿಂದ ಖರೀದಿಸಿ ಎಂದು ಮನವಿಮಾಡಿಕೊಂಡಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರಕ್ಕೆ ಸಹ ಮನವಿ ಮಾಡಿಕೊಂಡಿರುವ ರೈತರು ನಮಗೆ ಬೆಂಬಲ ಬೆಲೆ ನೀಡಿ ಸಹಕಾರಿಯಾಗಿ. ಇದರೊಂದಿಗೆ ದಾನಿಗಳು ನೇರವಾಗಿ ರೈತರಿಂದ ಸ್ಥಳದಲ್ಲೇ ಟೊಮೇಟೋ ಖರೀದಿಸಿದರೆ ಮಾಡಿದ ಖರ್ಚು ಆದರೂ ಸಿಗುತ್ತದೆ ಎಂದು ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ.