ಉಡುಪಿ: ಕೆಆರ್ಎಸ್ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಕಚ್ಚಾಟ ನಡೆಯುತ್ತಿದೆ. ಸುಮಲತಾಗೆ ಬಿಜೆಪಿ ಬೆಂಬಲ ಬೇಕಾಗಿಲ್ಲ. ಅವರು ಏಕಾಂಗಿಯಾಗಿ ಗೆದ್ದವರು ಏಕಾಂಗಿಯಾಗಿ ಹೋರಾಡುತ್ತಾರೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಲಿಂಬಾವಳಿ ಅವರು, ಇಬ್ಬರೂ ರಾಜಕಾರಣದ ಮಟ್ಟವನ್ನು ಮೀರಿ ಟೀಕೆ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಥರ ಕಚ್ಚಾಡುವುದು, ಯಾರಿಗೂ ಶೋಭೆ ತರುವಂತದ್ದಲ್ಲ ಇಬ್ಬರು ಯೋಚನೆ ಮಾಡಲಿ. ಕೆಆರ್ಎಸ್ ನಿಜವಾಗಿ ಬಿರುಕು ಬಿಟ್ಟಿದ್ದರೆ, ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಆ ಕೆಲಸವನ್ನು ನೀರಾವರಿ ಇಲಾಖೆ ನಿಶ್ಚಿತವಾಗಿ ಕೈಗೆತ್ತಿಕೊಳ್ಳುತ್ತದೆ. ಪರಸ್ಪರ ಆರೋಪಗಳನ್ನು ಮಾಡಿಕೊಳ್ಳೋದು ಶೋಭೆಯಲ್ಲ. ಇಲ್ಲಿ ವೈಯಕ್ತಿಕ ವಿಚಾರ, ಹಳೇ ಜಟಾಪಟಿಯನ್ನು ಮುಂದುವರೆಸೋದು ಸರಿಯಲ್ಲ ಎಂದರು.
ಉಡುಪಿ ಜಿಲ್ಲೆ ಕಾರ್ಕಳದ ರಾಧಾಕೃಷ್ಣ ಹಿರ್ಗಾನ ಎಂಬ ವ್ಯಕ್ತಿಯು ಸೈನ್ಯವನ್ನು ಅವಹೇಳನ ಮಾಡಿ ಫೇಸ್ಬುಕ್ ಪೋಸ್ಟ್ ಹಾಕಿದ ವಿಚಾರದಲ್ಲಿ ಸಿದ್ದರಾಮಯ್ಯ ಆತನ ಪರ ಟ್ವೀಟ್ ಮಾಡಿರೋದು ಸರಿಯಲ್ಲ. ಸೈನ್ಯವನ್ನು ಅವಹೇಳನ ಮಾಡಿದ ವ್ಯಕ್ತಿಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ ಎಂದು ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ
ಭಾರತೀಯ ಸೈನಿಕರನ್ನು ಕೊಲ್ಲಿ ಎಂದ ವಿಚಾರವನ್ನು ಖಂಡಿಸಬೇಕಿತ್ತು. ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ. ಈ ಥರ ಯಾರಾದರೂ ಹೇಳಿದ್ದರೆ ಯಾವುದೇ ಭಾರತೀಯನಿಗೆ ಸಹಜವಾಗಿ ಸ್ವಾಭಿಮಾನ ಕೆರಳುತ್ತದೆ, ಸಿದ್ದರಾಮಯ್ಯ ಆತನನ್ನು ಬೆಂಬಲಿಸಿರುವುದು ಸರಿಯಲ್ಲ. ನಮ್ಮ ಕಾರ್ಯಕರ್ತರ ಮೇಲೆ ಕ್ರಮ ಜರುಗಿಸಿದ್ದು ತಪ್ಪು ಎನ್ನುತ್ತಾರೆ. ಸಿದ್ದರಾಮಯ್ಯ ತಮ್ಮ ಹೇಳಿಕೆ ಹಿಂಪಡೆಯುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.