ಹಾವೇರಿ: ಕುಮಾರಸ್ವಾಮಿ ಒಬ್ಬ ಮಾಜಿ ಮುಖ್ಯಮಂತ್ರಿ, ಯಾರೇ ಇರಲಿ ಮಹಿಳೆ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೆಆರ್ಎಸ್ ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾರವರು ತಿಳಿಸಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದ ಮಂತ್ರಿಗಳು, ಜನಪ್ರತಿನಿಧಿಗಳು ಆ ರೀತಿ ಯಾವುದೂ ಆಗಿಲ್ಲ ಎಂದು ಹೇಳಿದ್ದರು. ಈ ವೇಳೆ ಅವರನ್ನೇ ಅಡ್ಡ ಮಲಗಿಸಿ ಅಂತಾ ಕುಮಾರಸ್ವಾಮಿ ಹೇಳಿರುವುದು ಸರಿಯಲ್ಲ. ಕುಮಾರಸ್ವಾಮಿ ಒಬ್ಬ ಮಾಜಿ ಮುಖ್ಯಮಂತ್ರಿ, ಯಾರೇ ಇರಲಿ ಮಹಿಳೆ ಬಗ್ಗೆ ಗೌರವಯುತವಾಗಿ ಮಾತನಾಡಬೇಕು ಎಂದು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ಮಾತನಾಡಿದ ಅವರು, ಸಿಎಂಗೆ ‘ಕುತ್ತಾ’ ಪದ ಬಳಸಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಒಬ್ಬ ಮನುಷ್ಯನ ಮಾತುಗಳು ಅವರ ಸಂಸ್ಕøತಿ ತೋರಿಸುತ್ತದೆ. ಮನುಷ್ಯನ ಸಂಸ್ಕೃತಿ ಯಾವ ರೀತಿ ಇದೆ ಎನ್ನುವುದು ಅರ್ಥ ಆಗುತ್ತೆ. ಸಿದ್ದರಾಮಯ್ಯ ಬಗ್ಗೆ ನಮಗೆ ಗೌರವ ಇದೆ. ಅವರು ಮಾಜಿ ಮುಖ್ಯಮಂತ್ರಿ, ವೈಯಕ್ತಿಕವಾಗಿ ಒಬ್ಬ ಮನುಷ್ಯನ ಬಗ್ಗೆ ಹೀನಾಯವಾಗಿ ಮಾತನಾಡೋದು ಅವರ ಘನತೆಗೆ ಸರಿಯಲ್ಲ. ಅದು ಅವರ ಸಂಸ್ಕೃತಿಗೂ ಸರಿಯಲ್ಲ ಎಂದು ಹಾರಿಹಾಯ್ದಿದ್ದಾರೆ.
ಆಗಸ್ಟ್ ವೇಳೆಗೆ ಸಿಎಂ ಬದಲಾಗುತ್ತಾರೆ ಎನ್ನುವ ಶಾಸಕ ಯತ್ನಾಳ್ ಹೇಳಿಕೆಗೆ ಈಗಾಗಲೇ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಇನ್ನೂ ಎರಡು ವರ್ಷ ಯಾವುದೇ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿತಾರೆ ಅಂತಾ ಹೇಳಿದ್ದಾರೆ. ಹೀಗೆ ಹೇಳಿದ ಮೇಲೂ ದಿನಾ ಒಂದೊಂದು ಹೇಳಿಕೆ ಕೊಟ್ಟುಕೊಂಡು ಹೋದರೆ ಅವಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ನಾಯಕತ್ವದಲ್ಲೇ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ:SSLC ಪರೀಕ್ಷೆ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ : ಸುರೇಶ್ ಕುಮಾರ್