ಬೆಂಗಳೂರು: ಸಚಿವ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಕ್ವಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಕ್ವಾರಿಗಳ ವಿಚಾರದಲ್ಲಿ ಏನೇನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಘಟನೆ ನಡೆದಿರುವ ಕ್ವಾರಿ ಸಹ ಅವರ ಸಂಬಂಧಿಕರದೇ ಆಗಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೋಡು ಮಾದರಿಯಲ್ಲೇ ಚಿಕ್ಕಬಳ್ಳಾಪುರದಲ್ಲಿ ಇಂದು ಸ್ಫೋಟ ನಡೆದಿದೆ. ಈ ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿಕರು ಎಂಬ ಮಾಹಿತಿ ಇದೆ. ಇದರ ಹಿಂದಿರುವ ರಾಜಕಾರಣಿಗಳ ಪಾತ್ರದ ಬಗ್ಗೆ ತನಿಖೆ ಆಗಬೇಕು. ಈ ಸರ್ಕಾರ ಬರೀ ಲೂಟಿ ಮಾಡುವುದರಲ್ಲಿ ಮಗ್ನವಾಗಿದೆ ಐದಾರು ಜನ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಜಿಲೆಟಿನ್ ಇಷ್ಟೊಂದು ಹೇಗೆ ಸಂಗ್ರಹ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಬ್ರಷ್ಠಾಚಾರ ಇರುವುದೇ ಕಾರಣ. ಸರ್ಕಾರ ಸತ್ತುಬಿದ್ದಿದೆ. ಲೂಟಿ ಮತ್ತು ದಂಧೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಜಿಲೆಟಿನ್ ಇಷ್ಟೊಂದು ಸುಲಭವಾಗಿ ಹೇಗೆ ಸಿಗುತ್ತಿದೆ. ವ್ಯವಸ್ಥಿತವಾಗಿ ಸಾಗಾಣಿಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಘಟನೆಗೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ. ಬೆಳಿಗಿನ ಜಾವ ಹೋಗಿ ಕೆಲಸ ಮಾಡಿ ಎಂದು ನಾವು ಹೇಳಿಲ್ಲವೆಂದು ಸಿಎಂ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ಇದೊಂದು ಅತ್ಯಂತ ಖಂಡನೀಯವಾದ ಹೇಳಿಕೆ. ಕೆಲಸ ಮಾಡಲು ಆಗುವುದಿಲ್ಲ ಎಂದರೆ ಬಿಟ್ಟು ಹೋಗಿ, ಸಮರ್ಥರು ಬಂದು ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು.