ಉಡುಪಿ: ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ ವಿಚಾರ ತಿಳಿದು ಮನಸ್ಸಿಗೆ ಅತೀವ ಖೇದವಾಗಿದೆ. ಸಂಗೀತ ಲೋಕವನ್ನು ಪ್ರೀತಿಸುವ ಎಲ್ಲರಿಗೆ ಇದು ದುಃಖಕರ ವಿಚಾರ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪದ ಸೂಚಿಸಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಕುರಿತು ಮಾತನಾಡಿದ ಅವರು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮನೆಮಾತಾಗಿದ್ದರು. ಕೋಟ್ಯಂತರ ಸಂಗೀತ ರಸಿಕರನ್ನು ಸೃಷ್ಟಿ ಮಾಡಿದ್ದರು. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದದ್ದು. ಅವರ ಅನಾರೋಗ್ಯದ ಸಂದರ್ಭ ಕೂಡ ಬಹಳಷ್ಟು ಮಂದಿ ಅವರಿಗಾಗಿ ಪ್ರಾರ್ಥನೆ ಮಾಡಿದ್ದರು ಎಂದು ಸ್ವಾಮೀಜಿ ಹೇಳಿದರು.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಬೇಕು. ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ. ಅವರ ಕುಟುಂಬಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಪೇಜಾವರಶ್ರೀ ಹೇಳಿದರು.