ಲಕ್ನೋ: ಶತಮಾನಗಳಿಂದ ಕಾಯುತ್ತಿರುವ ಕ್ಷಣ ಬಂದಿದ್ದು, ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ.
ದೇಶದ ಸಾಧು-ಸಂತರ ಧರ್ಮ ಹೋರಾಟ, ರಥಯಾತ್ರೆ ಆಂದೋಲನದ ಎಲ್ಲಾ ಮಜಲುಗಳನ್ನು ದಾಟಿ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿದೆ. ಹೀಗಾಗಿ ದೇಶಾದ್ಯಂತ ರಾಮನಾಮ ಜಪ ಮೊಳಗುತ್ತಿದೆ. ಎಲ್ಲೆಲ್ಲೂ ಮರ್ಯಾದಾ ಪುರುಷೋತ್ತನ ನಾಮವೇ ಅನುರಣಿಸುತ್ತಿದೆ. ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ.
ರಾಮ ಮಂದಿರದ ಆವರಣ:
* ರಾಮಮಂದಿರದ ಸುತ್ತ 4 ಚಿಕ್ಕ ಮಂದಿರ ಇರಲಿದೆ. ಭರತ, ಲಕ್ಷ್ಮಣ, ಸೀತಾ, ಗಣೇಶ ದೇವರ ಮಂದಿರವನ್ನು ನಿರ್ಮಿಸಲಾಗುತ್ತದೆ.
* ರಾಮಮಂದಿರದ ಮುಂಭಾಗ ಎತ್ತರದ ವಿಜಯ ಸ್ತಂಭ
* ರಾಮಮಂದಿರದ ಎಡಭಾಗದಲ್ಲಿ ಬೃಹತ್ ಕಲಾ ವೇದಿಕೆ
* ಕಲಾ ವೇದಿಕೆಗೆ 4 ದಿಕ್ಕುಗಳಿಂದಲೂ ಪ್ರವೇಶ ದ್ವಾರ
* ವೇದಿಕೆ ಸನಿಹದಲ್ಲೇ ಶ್ರೀರಾಮ ಸಂಶೋಧನಾ ಕೇಂದ್ರ
* ಮಂದಿರ ಸಂತರಿಗೆ, ಸಿಬ್ಬಂದಿಗೆ ಕ್ವಾರ್ಟರ್ಸ್, ರಾಮಕಥಾ ಕುಂಜ್
* 8 ಅತಿಥಿಗೃಹ, ಭೋಜನಶಾಲೆ ಸೇರಿ ಸುಸಜ್ಜಿತ ಕಾಂಪೌಂಡ್
* 65 ರಿಂದ 105 ಎಕರೆಯಲ್ಲಿ ಎಕರೆಯಲ್ಲಿ ಅಭಿವೃದ್ಧಿ
Ayodhya: Sanitisation being done at Hanuman Garhi temple, ahead of Prime Minister Narendra Modi's visit today. pic.twitter.com/8npqffwKUr
— ANI UP/Uttarakhand (@ANINewsUP) August 5, 2020
ಪ್ರಧಾನಿ ಮೋದಿ ಇಂದು ಬೆಳಗ್ಗೆ 11.30ಕ್ಕೆ ಅಯೋಧ್ಯೆಗೆ ಬಂದಿಳಿಯಲಿದ್ದು, ಮಧ್ಯಾಹ್ನ 12ಗಂಟೆಗೆ ರಾಮಜನ್ಮಭೂಮಿ ಸ್ಥಳಕ್ಕೆ ಮೋದಿ ತೆರಳಲಿದ್ದಾರೆ. ಅಲ್ಲಿ ಮೋದಿ ರಾಮ್ಲಲ್ಲಾ ದರ್ಶನ ಮಾಡಲಿದ್ದಾರೆ. ಈ ಮೂಲಕ ರಾಮ್ಲಲ್ಲಾ ದರ್ಶನ ಮಾಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಲ್ಲಿಯೇ ಪಾರಿಜಾತ ಗಿಡವನ್ನು ನೆಡಲಿದ್ದಾರೆ. ಮಧ್ಯಾಹ್ನ 12.15ರಿಂದ ಭೂಮಿ ಪೂಜೆ ವಿದ್ಯುಕ್ತವಾಗಿ ಶುರುವಾಗಲಿದೆ. ಮಧ್ಯಾಹ್ಮ 12.44ಕ್ಕೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಪ್ರಧಾನಿ ಮೋದಿ ಭೂಮಿ ಪೂಜೆ ಮುಗಿಸಲಿದ್ದಾರೆ. 40 ಕೆಜಿಯ ಬೆಳ್ಳಿ ಇಟ್ಟಿಗೆ ಇಟ್ಟು ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.