ಲಕ್ನೋ: ಉತ್ತರ ಪ್ರದೇಶದ ಶಹಜಹಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ನಗ್ನ ಸ್ಥಿತಿಯಲ್ಲಿ ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ.
ಯುವತಿ, ಜಲಾಲಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಟ್ರಸ್ಟ್ ನಡೆಸುತ್ತಿರುವ ಸ್ವಾಮಿ ಶುಕ್ರದೇವಾನಂದ್ ಕಾಲೇಜಿನ ಬಿಎ ಪದವಿಯ ವಿದ್ಯಾರ್ಥಿನಿಯಾಗಿದ್ದಾಳೆ. ಯುವತಿಯ ದೇಹವು ಸುಟ್ಟಗಾಯಗಳಿಂದ ಕೂಡಿದ್ದು, ಆಕೆಯ ವಸ್ತ್ರಕಳಚಿ ಆರೋಪಿಗಳು ರಸ್ತೆಬದಿ ಎಸೆದು ಹೋಗಿದ್ದಾರೆ. ಯುವತಿಯ ದೇಹವು ಶೇ.60 ರಷ್ಟು ಬೆಂಕಿಗಾಹುತಿಯಾಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಯುವತಿ ತಂದೆ ತರಗತಿಗೆ ಹಾಜರಾಗಲೆಂದು ಆಕೆಯನ್ನು ಕಾಲೇಜಿಗೆ ಬಿಟ್ಟಿದ್ದಾರೆ. ಆದರೆ ಮಗಳು ತರಗತಿಯಿಂದ ಹಿಂದಿರುಗದಿರುವುದನ್ನು ಕಂಡು ಗಾಬರಿಗೊಂಡು ಆಕೆಯ ತಂದೆ ಹುಡುಕಾಟ ನಡೆಸಿದ್ದಾರೆ. ಬಳಿಕ ಪೊಲೀಸರು ಘಟನೆ ವಿಚಾರವಾಗಿ ಯುವತಿಯ ತಂದೆಗೆ ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ ಯುವತಿಯ ತಂದೆ ವಾರದಲ್ಲಿ ಅಥವಾ 15 ದಿನಕ್ಕೊಮ್ಮೆ ಮಗಳನ್ನು ಕಾಲೇಜಿಗೆ ಕರೆದೊಯ್ದು ತರಗತಿ ಮುಕ್ತಾಯಗೊಳ್ಳುವವರೆಗೂ ಕಾದು ನಂತರ ಮನೆಗೆ ವಾಪಸ್ಸು ಕರೆದುಕೊಂಡು ಬರುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.