– ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 279ಕ್ಕೆ ಏರಿಕೆ
– ವ್ಯಾಪಾರಿಗಳಿಂದ ಸ್ವಯಂ ನಿರ್ಬಂಧ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆಸ್ಫೋಟವಾಗುತ್ತಿದ್ದು, ಹೊಸ ಏರಿಯಾಗಳಿಗೆ ಸೋಂಕು ಹಬ್ಬುತ್ತಿದೆ. ಹೀಗಾಗಿ ಸರ್ಕಾರಕ್ಕೆ ಹೊಸ ಸವಾಲುಗಳು ಎದುರಾಗುತ್ತಿವೆ.
ಸದಾ ಜನಜಂಗುಳಿಯಿಂದ ಕೂಡಿರುವ ಚಿಕ್ಕಪೇಟೆಯಲ್ಲಿ ಇದುವರೆಗೆ 25 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ವ್ಯಾಪಾರಿಗಳೇ ಸ್ವಯಂ ಪ್ರೇರಿತರಾಗಿ ಲಾಕ್ಡೌನ್ಗೆ ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಮರ್ಚೆಂಟ್ಸ್, ಜ್ಯುವೆಲ್ಲರಿ ಅಸೋಸಿಯೇಷನ್ ಸೇರಿದಂತೆ ಒಟ್ಟು 8ರಿಂದ 10 ಅಸೋಸಿಯೇಷನ್ಗಳು 1 ವಾರಗಳ ಕಾಲ ಸ್ವಯಂ ಪ್ರೇರಿತ ನಿರ್ಬಂಧ ಹೇರಿಕೊಂಡಿವೆ. ಬಟ್ಟೆ ವ್ಯಾಪಾರಿಗಳು ಇದಕ್ಕೆ ಬೆಂಬಲ ನೀಡಿಲ್ಲ.
ಬೆಂಗಳೂರಿನ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 279ಕ್ಕೆ ಹೆಚ್ಚಳವಾಗಿದ್ದು, ಸಿಲಿಕಾನ್ ಸಿಟಿ ಜನತೆಯನ್ನು ಆತಂಕಕ್ಕೆ ದೂಡಿದೆ. ಬೊಮ್ಮನಹಳ್ಳಿಯ 38 ವಲಯ, ದಾಸರಹಳ್ಳಿಯ 9, ಬೆಂಗಳೂರು ಪೂರ್ವದ 45, ಮಹದೇವಪುರದ 31, ರಾಜರಾಜೇಶ್ವರಿ ನಗರದ 12, ಬೆಂಗಳೂರು ದಕ್ಷಿಣದ 81, ಬೆಂಗಳೂರು ಪಶ್ಚಿಮದ 38 ಹಾಗೂ ಯಲಹಂಕದ 17 ವಲಯಗಳನ್ನು ಗುರುತಿಸಲಾಗಿದೆ.
ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ತನ್ನ ರಣಕೇಕೆಯನ್ನು ಹೆಚ್ಚಿಸಿದ್ದು, ಇಂದು ಬರೋಬ್ಬರಿ ಇಂದು 196 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 1272ಕ್ಕೇರಿದೆ. ನಗರದಲ್ಲಿ ಸಮುದಾಯಕ್ಕೆ ಕೊರೊನಾ ಹರಡಿದೆಯೇ ಎಂಬ ಅನುಮಾನ ಮೂಡಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 64ಕ್ಕೆ ತಲುಪಿದೆ. ನಗರದಲ್ಲಿ 31 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಒಟ್ಟು ಐವರು ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 77 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.