ಬೆಂಗಳೂರು: ಸಿಲಿಕಾನ್ ಸಿಟಿ ಅರ್ಧ ಲಕ್ಷ ಕೊರೊನಾ ಪ್ರಕರಣಗಳ ಮೈಲಿಗಲ್ಲಿಗೆ ಸನಿಹದಲ್ಲಿದ್ದು, ನಗರದಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ ಇದೀಗ 15 ಸಾವಿರ ದಾಟಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೊರೊನಾ ಹತ್ತಿಕ್ಕಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ನಿಯಂತ್ರಣಕ್ಕೆ ಸಿಗದೆ ಗಲ್ಲಿಗಲ್ಲಿಯಲ್ಲಿ ಆರ್ಭಟಿಸುತ್ತಿರುವ ಕೊರೊನಾ ಹತ್ತಿಕ್ಕುವ ನೆಪದಲ್ಲಿ ಸರ್ಕಾರ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿದ್ದು, ಇಂದು ಸಹ ಹಲವು ರೂಲ್ಸ್ ಜಾರಿ ಮಾಡಲಾಗಿದೆ. ಹೋಮ್ ಐಸೋಲೇಷನ್ ಕುರಿತು ನಿಯಮ ರೂಪಿಸಿದ್ದು, ಈ ನಿಯಮಗಳು ಯಾವ ರೀತಿ ಕಾರ್ಯನಿರ್ವಹಿಸಲಿವೆ ಕಾದು ನೋಡಬೇಕಿದೆ.
ಹೋಮ್ ಐಸೋಲೇಷನ್ ಆಗುವುದು ಇನ್ನು ಸೋಂಕಿತರ ನಿರ್ಧಾರ ಅಲ್ಲ. ಬದಲಿಗೆ ಸೋಂಕಿತರ ಹೋಮ್ ಐಸೋಲೇಷನ್ ಬಗ್ಗೆ ಪಾಲಿಕೆ ನಿರ್ಧಾರ ಮಾಡಲಿದೆಯಂತೆ. ಅಲ್ಲದೆ ಸೋಂಕಿತರ ಮೇಲೆ ನಿಗಾ ಇಡಲು ವಾರ್ಡ್ಗಳಲ್ಲಿ ಪ್ರತ್ಯೇಕ ತಂಡ ರಚಿಸಲು ಮುಂದಾಗಿದ್ದು, ಸೋಂಕಿತರ ಮನೆಗೆ ತೆರಳಿ ವೈದ್ಯಕೀಯ ತಂಡದಿಂದ ಆರೋಗ್ಯ ತಪಾಸಣೆ ಮಾಡಲು ನಿರ್ಧರಿಸಲಾಗಿದೆ.
ಅಲ್ಲದೆ ಚಿಕ್ಕಪೇಟೆಯಲ್ಲಿ ವಾಣಿಜ್ಯ ವ್ಯವಹಾರಕ್ಕೆ ಹೊಸ ಐಡಿಯಾ ರೂಪಿಸಿದ್ದು, ದಿನ ಬಿಟ್ಟು ದಿನ ಅಂಗಡಿ ತೆರೆಯಲು ಚಿಂತಿಸಲಾಗಿದೆಯಂತೆ. ಒಂದು ಅಂಗಡಿ ತೆರೆದರೆ, ಅದರ ಅಕ್ಕಪಕ್ಕದ ಅಂಗಡಿ ಬಂದ್ ಮಾಡಬೇಕಂತೆ. ಅಲ್ಲದೆ ಶೇ.50ರಷ್ಟು ಸಿಬ್ಬಂದಿಯನ್ನು ಮಾತ್ರ ಇಟ್ಟುಕೊಂಡು ಕೆಲಸ ಮಾಡಬೇಕು, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯ ಮಾರುಕಟ್ಟೆಗಳು ಬಂದ್ ಆಗಿರಲಿವೆ. ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯಳದಲ್ಲಿ ಧಾರ್ಮಿಕ ಸ್ಥಳಗಳನ್ನು ಬಂದ್ ಮಾಡುವ ಕುರಿತು ನಿರ್ಧರಿಸಲಾಗಿದೆ.
ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಕಲಾಸಿಪಾಳ್ಯಗಳಲ್ಲಿ ಮದ್ಯದಂಗಡಿ, ಹೂವು, ಹಣ್ಣು, ತರಕಾರಿ ವ್ಯಾಪಾರ ಸಂಪೂರ್ಣ ಬಂದ್ ಆಗಿರಲಿದೆ. ಮುಂದಿನ ಆದೇಶದವರೆಗೂ ಮಿನಿ ಲಾಕ್ ಜಾರಿಯಲ್ಲಿ ಇರಲಿದೆ ಎಂದು ಬಿಬಿಎಂಪಿ ತಿಳಿಸಿದೆ.