ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನಗರದೆಲ್ಲೆಡೆ ಮುಂಗಾರು ಮಳೆಯ ಅಬ್ಬರ ಶುರುವಾಗಿದೆ.
ಮಲ್ಲೇಶ್ವರಂ, ಯಶವಂತಪುರ, ವೈಯಾಲಿಕಾವಲ್, ಪ್ಯಾಲೇಸ್, ಗುಟ್ಟಹಳ್ಳಿ, ಶ್ರೀರಾಮಪುರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನೂ ಮೆಜೆಸ್ಟಿಕ್, ಮಾಗಡಿ ರೋಡ್, ಚಾಮರಾಜ್ ಪೇಟೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದೆ.
ಮಳೆಗೆ ಮಲ್ಲೇಶ್ವರಂ ರಸ್ತೆಗಳು ಕೆರೆಯಂತಾಗಿವೆ. ರಸ್ತೆಯ ತುಂಬಾ ಮಳೆಯ ನೀರು ಹರಿಯುತ್ತಿದ್ದು, ಜನರು ಮತ್ತು ವಾಹನ ಸವಾರರು ಓಡಾಡಲು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಎರಡು-ಮೂರು ದಿನ ಮಳೆಯಾಗುವ ನಿರೀಕ್ಷೆ ಇದೆ.
ಮುಂಗಾರು ಚುರುಕಾಗಿದ್ದು, ಗುಡುಗು ಸಹಿತ ವರುಣ ಅರ್ಭರಿಸಲಿದ್ದಾನೆ. ಈಗಾಗಲೇ ಬೆಂಗಳೂರಿನಲ್ಲಿ 13 ಮಿಲಿ ಮೀಟರ್ ಮಳೆಯಾಗಿದೆ. ಬೆಂಗಳೂರು ಪೂರ್ವ ಹಾಗೂ ಉತ್ತರದಲ್ಲಿ ಹೆಚ್ಚು ಮಳೆಯಾಗಲಿದೆ. ಮಳೆ ನಿರಂತರವಾಗಿ ಬಾರದೆ ಬಿಟ್ಟು ಬಿಟ್ಟು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.