ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ನಾಯಕರು ಸಿಬಿಐ ಅನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ವಿನಯ್ ಕುಲಕರ್ಣಿಯವರನ್ನು ಸಿಬಿಐ ಪೊಲೀಸರು ವಶಕ್ಕೆ ಪಡೆದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಕೇಸ್ ಬಗ್ಗೆ ಈ ಹಿಂದೆ ನಾನು ಕುಲಕರ್ಣಿ ಜೊತೆ ಚರ್ಚೆ ಮಾಡಿದ್ದೆ. ವಿನಯ್ ಕುಲಕರ್ಣಿ ಗಟ್ಟಿ ನಾಯಕರಾಗಿ ಬೆಳೆದಿದ್ದಾರೆ. ಈ ಹಿಂದೆ ಒಬ್ಬ ಮಿನಿಸ್ಟರ್, ವಿನಯ್ ಅವರನ್ನ ಬಿಜೆಪಿ ಪಕ್ಷಕ್ಕೆ ಬನ್ನಿ ಎಂದಿದ್ದರು. ಬಿಜೆಪಿ ನಾಯಕರು ಸಿಬಿಐ ಅನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ಈಗ ಖುಷಿ ಪಟ್ಟಿದ್ದಾರೆ. ಇದು ಶಾಶ್ವತವಾಗಿ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಬಿಐ ಮ್ಯಾನುಯಲ್ ನಾನು ಓದಿದ್ದೇನೆ. ಯಾವುದೇ ರಾಜಕೀಯ ಒತ್ತಡಕ್ಕೆ ಸಿಬಿಐ ಅಧಿಕಾರಿಗಳು ಒಳಗಾಗುವುದು ಬೇಡ. ರಾಜಕೀಯ ಚಕ್ರ ತಿರುತ್ತಿರುಗುತ್ತಿರುತ್ತದೆ. ಅಧಿಕಾರಿಗಳು ಇದನ್ನ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಎಷ್ಟು ದಿನ ಬೇಕಿದ್ದರು ವಿಚಾರಣೆ ಮಾಡಲಿ, ನಮ್ಮ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದರು.
ಸಿಬಿಐ ಅಧಿಕಾರಿಗಳು ಕಾನೂನು ಬದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ. ಕಾನೂನಿನ ಹೊರತಾಗಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ನನ್ನ ಮೇಲೆ ಯಡಿಯೂಪ್ಪ ಕೇಸ್ ಹಾಕಿದ್ದಾರೆ. ಸಿಬಿಐ ರಾಜಕೀಯ ಪಕ್ಷಗಳಿಗೆ ತಲೆಬಾಗಬಾರದು. ಜಾರ್ಜ್ ಅವರಿಗೆ ಎಷ್ಟು ಕಿರುಕುಳ ಕೊಟ್ಟಿದ್ರು ನನಗೆ ಎಲ್ಲ ಗೊತ್ತಿದೆ. ಸಿಬಿಐನವರು ರಾಜಕೀಯ ವೆಪನ್ ಆಗಬಾರದು. ದೇಶದ ಕಾನೂನಿನ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮ ಪಕ್ಷದವರು ಯಾರೂ ತಪ್ಪು ಮಾಡಿಲ್ಲ. ನಮ್ಮ ನಾಯಕರನ್ನು ಮುಗಿಸೋಕೆ ಇದನ್ನ ಮಾಡ್ತಿದ್ದಾರೆ. ನಾವು ವಿನಯ್ ಕುಲಕರ್ಣಿ ಪರವಾಗಿಯೇ ಇದ್ದೇವೆ ಎಂದು ಕಿಡಿಕಾರಿದರು.