ಸಿನಿಮಾ ಶೈಲಿಯಲ್ಲಿ ವರ್ತೂರ್ ಕಿಡ್ನಾಪ್ – ಪ್ರಕರಣದ ಸುತ್ತ ಅನುಮಾನದ ಹುತ್ತ

Public TV
3 Min Read
varthur prakash

– ಬೆಂಗಳೂರಿಗೆ ಬರುತ್ತಿದ್ದಾಗ ನ.26ರಂದು ಕಿಡ್ನಾಪ್
– ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಲಾಂಗ್, ರಾಡ್‍ಗಳಿಂದ ಹಲ್ಲೆ

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‍ರನ್ನು ಅಪಹರಿಸಿ ಹಿಂಸೆ ನೀಡಿದ ಪ್ರಕರಣದ ಸುತ್ತ ಅನುಮಾನ ಹುತ್ತ ಸೃಷ್ಟಿಯಾಗಿದೆ. ದೂರಿನ ಪ್ರಕಾರ ವರ್ತೂರು ಪ್ರಕಾಶ್ 3 ದಿನ ಕಿಡ್ನಾಪ್ ಆಗಿದ್ದರು. ಕಿಡ್ನಾಪ್ ಆಗಿದ್ದರೂ ವರ್ತೂರು ಕುಟುಂಬಸ್ಥರು ನಾಪತ್ತೆ ದೂರನ್ನು ಯಾಕೆ ನೀಡಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಹೌದು. ವರ್ತೂರ್ ಪ್ರಕಾಶ್ ಮಾಜಿ ಸಚವರಾಗಿದ್ದಾರೆ. ಅಷ್ಟೇ ಅಲ್ಲದೇ ಹಲವು ರಾಜಕೀಯ ನಾಯಕರಿಗೆ ಪರಿಚಯ ಹೊಂದಿದ್ದಾರೆ. ಸಾಧಾರಣವಾಗಿ ಹೊರ ಹೋದ ವ್ಯಕ್ತಿ ಒಂದು ದಿನ ಮನೆಗೆ ಬಾರದೇ ಇದ್ದರೂ ಕುಟುಂಬದ ಸದಸ್ಯರು ಆತನನ್ನು ಹುಡುಕಲು ಆರಂಭಿಸಿ ಕೊನೆಗೆ ನಾಪತ್ತೆ ದೂರನ್ನು ದಾಖಲಿಸುತ್ತಾರೆ. ಹೀಗಿರುವಾಗ ಮೂರು ದಿನ ಕಿಡ್ನಾಪ್ ಆಗಿದ್ದರೂ ಮನೆಯವರು ದೂರನ್ನು ಯಾಕೆ ದಾಖಲಿಸಿಲ್ಲ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ.

varthur prakash 2

ದೂರು ತಡ ಯಾಕೆ?
ಅಪಹರಣಕಾರರು ಕಾರಿನಿಂದ ಇಳಿಸಿದ ಬಳಿಕ ಅಪರಿಚಿತ ಕಾರನ್ನು ಅಡ್ಡ ಹಾಕಿ ಕೆ.ಆರ್.ಪುರಂನಲ್ಲಿರುವ ಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದಿದ್ದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮಂಗಳವಾರ ಬೆಳ್ಳಂದೂರು ಸ್ಮಶಾನದ ಬಳಿ ನನ್ನ ಕಾರು ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ಈಗ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.

ಯಾವ ದಿನ ಏನಾಯ್ತು?
ನವೆಂಬರ್ 25:
ಕೋಲಾರದ ಬೆಗ್ಲಿಹೊಸಹಳ್ಳಿ ಫಾರಂಹೌಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಸಂಜೆ 7 ಗಂಟೆಗೆ ಅಪಹರಣ ನಡೆದಿದೆ. ಎರಡು ಕಾರುಗಳಲ್ಲಿ ಬಂದಿದ್ದ 8 ಜನರ ತಂಡ ಲಾಂಗ್ ತೋರಿಸಿ ಕಾರು ಅಡ್ಡಗಟ್ಟಿ ವರ್ತೂರ್ ಪ್ರಕಾಶ್, ಚಾಲಕನ ಅಪಹರಣ ಮಾಡಿದ್ದಾರೆ. ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಹಲ್ಲೆ ನಡೆಸಿ ಕಣ್ಣಿಗೆ ಪಟ್ಟಿ ಕಟ್ಟಿ ರಹಸ್ಯ ಸ್ಥಳಕ್ಕೆ ಕರೆದೊಯ್ದು 30 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

Varthur Prakash kidnap 1

ನವೆಂಬರ್ 26:
ಅಪಹರಣಕಾರರ ಹಿಂಸೆ ತಾಳಲಾರದೇ ನಯಾಜ್ ಎಂಬಾತನ ಮೂಲಕ 48 ಲಕ್ಷ ಹಣ ವರ್ತೂರ್ ತರಿಸಿಕೊಂಡಿದ್ದಾರೆ. ಕೋಲಾರದ ಕಾಫಿಡೇ ಶಾಪ್ ಬಳಿ ನಯಾಜ್‍ನಿಂದ 48 ಲಕ್ಷ ರೂ. ಹಸ್ತಾಂತರವಾಗಿದೆ. ಈ ವೇಳೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು ಚಿತ್ರಹಿಂಸೆ ನೀಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.

ನವೆಂಬರ್ 27:
ವರ್ತೂರು ಪ್ರಕಾಶ್ ಕೊಟ್ಟ ದೂರಿನಲ್ಲಿ ಈ ದಿನದ ಬಗ್ಗೆ ಉಲ್ಲೇಖ ಇಲ್ಲ.

Varthur Prakash kidnap 2

 

ನವೆಂಬರ್ 28:
ಮುಂಜಾನೆಯವರೆಗೂ ಚಿತ್ರಹಿಂಸೆ ನೀಡಿ ಹಣ ಇಲ್ಲ ಎಂದಾಗ ಚಾಲಕನ ತಲೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಮಧ್ಯರಾತ್ರಿ 1 ಗಂಟೆಗೆ ಕಾರು ಚಾಲಕ ಮೂರ್ಛೆ ತಪ್ಪಿಬಿದ್ದಿದ್ದ. ಸತ್ತು ಹೋಗಿದ್ದಾನೆ ಭಾವಿಸಿ ಸ್ವಲ್ಪ ದೂರದಲ್ಲಿ ಅಪಹರಣಕಾರರು ಮದ್ಯಪಾನ ಪಾರ್ಟಿ ಮಾಡಿದ್ದಾರೆ. ಆದರೆ ಪ್ರಜ್ಞೆ ಬಂದ ಬಳಿಕ ಅಪಹರಣಕಾರರಿಂದ ಕಾರು ಚಾಲಕ ತಪ್ಪಿಸಿಕೊಂಡಿದ್ದಾನೆ. ಬಳಿಕ ವರ್ತೂರು ಪ್ರಕಾಶ್ ಅವರನ್ನು ಹೊಸಕೋಟೆಯ ಶಿವನಾಪುರ ಬಳಿ ಕಾರಿನಿಂದ ಇಳಿಸಿದ ಅಪಹರಣಕಾರರು ದೂರು ನೀಡಿದರೆ ನಿನ್ನ ಮಕ್ಕಳು ಕೊಲೆ ಆಗ್ತಾರೆ ಎಂದು ಧಮ್ಕಿ ಹಾಕಿ ಪರಾರಿಯಾಗಿದ್ದಾರೆ.

ಅನುಮಾನಕ್ಕೆ ಕಾರಣ ಏನು?
1. ದೂರಿನ ಪ್ರಕಾರ ವರ್ತೂರು ಪ್ರಕಾಶ್ 3 ದಿನ ಕಿಡ್ನಾಪ್ ಆಗಿದ್ದಾರೆ. ಆದರೂ, ವರ್ತೂರು ಕುಟುಂಬಸ್ಥರು ನಾಪತ್ತೆ ದೂರನ್ನು ನೀಡಲಿಲ್ಲ ಯಾಕೆ?
2. ರಿಲೀಸ್ ಆದ ತಕ್ಷಣ ವರ್ತೂರ್ ಪ್ರಕಾಶ್ ದೂರು ನೀಡಲಿಲ್ಲ ಯಾಕೆ?
3. ತಡವಾಗಿ ಕೊಟ್ಟ ದೂರಿನಲ್ಲಿ ಅಪಹರಣಕಾರರ ವೇಷಭೂಷಣ, ಭಾಷೆ ಬಗ್ಗೆ ಉಲ್ಲೇಖವಿಲ್ಲ ಏಕೆ?
4. 30 ಕೋಟಿಗೆ ಬೇಡಿಕೆ ಇಟ್ಟವರು ಕೇವಲ 48 ಲಕ್ಷಕ್ಕೆ ಸುಮ್ಮನಾದರೇ?
5. ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾದ ಚಾಲಕ ದೂರು ನೀಡಲಿಲ್ಲ ಯಾಕೆ?
6. ಅಪಹರಣಕಾರರಿಗೆ 48 ಲಕ್ಷ ತಲುಪಿಸಿದ್ದ ನಯಾಜ್ ದೂರು ಕೊಡಲಿಲಲ್ಲ ಯಾಕೆ?

 

Share This Article
Leave a Comment

Leave a Reply

Your email address will not be published. Required fields are marked *