– ಆ ಸಿದ್ಧಾರ್ಥ ಜ್ಞಾನ ಕೊಟ್ಟ, ಈ ಸಿದ್ಧಾರ್ಥ ಕೆಲಸ, ಬದುಕು ಕೊಟ್ಟ
ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗ್ಡೆ ಸಮಾಧಿ ಬಳಿ ಅವಧೂತ ವಿನಯ್ ಗುರೂಜಿ ಬುದ್ಧನ ವಿಗ್ರಹವನ್ನ ಪ್ರತಿಷ್ಠಾಪನೆ ಮಾಡಿದ್ದಾರೆ.
ದಿವಂಗತ ಸಿದ್ಧಾರ್ಥ್ ಹೆಗ್ಡೆಯವರ ಸ್ವಗ್ರಾಮವಾದ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟಿಗೆ ಭೇಟಿ ನೀಡಿದ್ದ ವಿನಯ್ ಗುರೂಜಿ, ಅವರ ಸಮಾಧಿ ಬಳಿ ಬುದ್ಧನ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದಾರೆ. ಇದೇ ವೇಳೆ ಮಾತನಾಡಿ, ಆ ಸಿದ್ಧಾರ್ಥ ಜಗತ್ತಿಗೆ ಜ್ಞಾನ ಕೊಟ್ಟ, ಈ ಸಿದ್ಧಾರ್ಥ ಲಕ್ಷಾಂತರ ಜನರಿಗೆ ಜೀವನ ಹಾಗೂ ಬದುಕನ್ನ ಕೊಟ್ಟ ಎಂದು ಸಿದ್ಧಾರ್ಥ್ ಹೆಗ್ಡೆಯವರ ಸರಳ ವ್ಯಕ್ತಿತ್ವವನ್ನ ಸ್ಮರಿಸಿದ್ದಾರೆ.
ಆಶ್ರಮದಲ್ಲಿ ಪೂಜಿಸುತ್ತಿದ್ದ ಬುದ್ಧನ ಮೂರ್ತಿಯನ್ನ ಸಿದ್ಧಾರ್ಥ್ ಹೆಗ್ಡೆಯವರ ಮನೆ ಪಕ್ಕದಲ್ಲಿನ ಅವರ ಸಮಾಧಿ ಬಳಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ವೇಳೆ ಸಿದ್ಧಾರ್ಥ್ ಹೆಗ್ಡೆ ಅವರ ತಾಯಿ ವಾಸಂತಿ ಹೆಗ್ಡೆ ಹಾಗೂ ಕುಟುಂಬದ ಆಪ್ತರು ಭಾಗಿಯಾಗಿದ್ದರು. ಚೇತನಹಳ್ಳಿಗೆ ಭೇಟಿ ನೀಡುವ ಮುನ್ನ ವಿನಯ್ ಗುರೂಜಿ ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನ ಪಡೆದಿದ್ದಾರೆ. ಇದೇ ವೇಳೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಧರ್ಮಕರ್ತರಾದ ಭೀಮೇಶ್ವರ ಜೋಷಿಯವರು ವಿನಯ್ ಗುರೂಜಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ.