ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಕುಡುಕ ಯುವಕನೊಬ್ಬ ಕಿರಿಕಿರಿ ಉಂಟುಮಾಡಿದ ಘಟನೆ ನಡೆದಿದೆ.
ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಸಿದ್ದರಾಮಯ್ಯ ಅವರು 35 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಭಾಷಣ ಮಾಡುತ್ತಿದ್ದರು. ಈ ವೇಳೆ ಮದ್ಯದ ನಶೆಯಲ್ಲಿದ್ದ ಯುವಕನೊಬ್ಬ ಹೇ… ಸಿದ್ದರಾಮಯ್ಯ.. ಹೇ ಸಿದ್ದರಾಮಯ್ಯ.. ಎಂದು ಕೂಗಾಟ ಆರಂಭಿಸಿದ್ದಾನೆ.
ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಯುವಕನನ್ನು ಸುಮ್ಮನಿರುವಂತೆ ಹೇಳಿದ್ದಾರೆ. ಆದರೂ ಬಿಡದ ಯುವಕ ಸಿದ್ದರಾಮಯ್ಯ ಅಂತ ಏಕವಚನದಿಂದಲೇ ಕೂಗಾಡಿದ್ದಾನೆ. ಯುವಕ ಮಾತು ಕೇಳದಿದ್ದಾಗ ಪೊಲೀಸರೇ ಆತನನ್ನು ಎತ್ತಿಕೊಂಡು ಹೋಗಿ ಹೊರಗಡೆ ಬಿಟ್ಟ ಪ್ರಸಂಗ ನಡೆದಿದೆ.
ಈ ಹಿಂದೆ ಬೆಳಗಾವಿಯ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ‘ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಪೀರಪ್ಪ ಕಟ್ಟಿಮನಿ ಎಂಬವರು ‘ಹೌದು ಹುಲಿಯಾ’ ಎಂದಿದ್ದು, ಆ ಬಳಿಕ ಡೈಲಾಗ್ ಸಖತ್ ಫೇಮಸ್ ಆಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು. ಭಾರೀ ಸುದ್ದಿಯಾದ ಬಳಿಕ ಪಕೀರಪ್ಪ (ಪೀರಪ್ಪ) ಕಟ್ಟಿಮನಿ ಹುಲಿಯಾ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಆಶೀರ್ವಾದ ಪಡೆದು ಕುಶಾಲೋಪರಿ ವಿಚಾರಿಸಿದ್ದರು.