– ದಿನಕ್ಕೆ 2 ಬಾರಿ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ
– ಮನಸ್ಸು ಮಾಡಿದ್ರೆ 5 ಕೈ ಶಾಸಕರು ರಾಜೀನಾಮೆ ನೀಡ್ತಾರೆ
ಬೆಳಗಾವಿ: ದಿನಕ್ಕೆ ಎರಡು ಬಾರಿ ಸಿದ್ದರಾಮಯ್ಯ ಜತೆಗೆ ಮಾತಾಡುತ್ತೇನೆ. ಇಂದಿಗೂ ಮಾತನಾಡುತ್ತೇನೆ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳುವ ಮೂಲಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗ್ರಾ.ಪಂ ಸದಸ್ಯರಿಗೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಿಸಿದ ಮಾತನಾಡಿದ ಅವರು ನಾನು ಮನಸ್ಸು ಮಾಡಿದ್ರೇ 24 ಗಂಟೆಯಲ್ಲಿ ಐದು ಜನ ಕಾಂಗ್ರೆಸ್ ಶಾಸಕರನ್ನ ರಾಜೀನಾಮೆ ಕೊಡಿಸುತ್ತೇನೆ. ನೀವು ನಂಬಲು ಆಗಲ್ಲಾ. ಅಂತ ದೊಡ್ಡ ನಾಯಕರು ಬಿಜೆಪಿ ಬರಲು ತಯಾರಿದ್ದಾರೆ. ಟಾಪ್ 1 ರಿಂದ ಐದರ ವರೆಗಿನ ಕಾಂಗ್ರೆಸ್ ನಾಯಕರನ್ನ ಕರೆತರುತ್ತೇನೆ. ಅವರ ಹೆಸರನ್ನ ಕೇಳಿದ್ರೇ ನೀವು ಕೂಡ ಗಾಬರಿಯಾಗುತ್ತೀರಿ. ಕಾಂಗ್ರೆಸ್ನ ಮಹಾನ್ ನಾಯಕರನ್ನ ಬಿಜೆಪಿಗೆ ತರುತ್ತೇನೆ ಎಂದು ಹೇಳಿದ್ದಾರೆ
ನಾವು ಬಿಜೆಪಿಯಲ್ಲಿ ಆನಂದದಿಂದ ಕೆಲಸ ಮಾಡುತ್ತಿದ್ದೇವೆ. ಹದಿನೇಳು ಜನರು ಶಾಸಕರು ಬಿಜೆಪಿಯಲ್ಲಿ ಗಟ್ಟಿಯಾಗಿರುತ್ತೇವೆ. ಕಾಂಗ್ರೆಸ್ ನಲ್ಲಿ ನಮ್ಮನ್ನ ಮೂಲೆಯಲ್ಲಿ ಕುಡಿಸಿದ್ದರು. ನಾವು ಮತ್ತೆ ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದಿದ್ದಾರೆ.
ಒಬ್ಬ ಹೆಣ್ಣು ಮಗಳಿದ್ದಾಳೆ ಅವರಿಗೆ ದೇವರು ಒಳ್ಳೆಯದು ಮಾಡಲಿ. ತಲೆ ಕೆಡಿಸಿಕೊಂಡು ಮಾತಾಡಿದ್ರೇ ಬಹಳ ಕಷ್ಟ ಆಗುತ್ತೆ. ಅವರ ಬಗ್ಗೆ ನಾವು ಕೆಟ್ಟದು ಮಾತಾಡುವುದಿಲ್ಲ. ನೀವು ಮಾತಾಡಬೇಡಿ ಎಂದು ಹೇಳು ಮೂಲಕವಾಗಿ ಅಧಿಕಾರದ ದುರುಪಯೋಗ ಮಾಡಿಕೊಂಡು ಕೆಲಸ ಮಾಡ್ತಿದ್ದಾರೆ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಅಧಿಕಾರಕ್ಕೆ ಇಲ್ಲ ಅದನ್ನ ತರುವ ಕೆಲಸ ಮಾಡುತ್ತೇವೆ. ಮುಂದಿನ ಭಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುವ ನಿರ್ಧಾರ ಮಾಡಿ ಸಂಕಲ್ಪ ಮಾಡಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ 23 ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದಾರೆ. ಚುನಾವಣೆ ಫಲಿತಾಂಶ ಪೂರ್ತಿ ಬರುವ ಮುನ್ನ ರಮೇಶ್ ಜಾರಕಿಹೊಳಿಗೆ ಮುಖಭಂಗ ಅಂತಾ ಬಂತೂ. ಅತೀ ಶೀಘ್ರದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರು ಎಷ್ಟಿದ್ದಾರೆ ಅಂತಾ ತೋರಿಸುತ್ತೇನೆ ಅಂತಾ ಮಾತುಕೊಟ್ಟಿದ್ದೆನೆ ಎಂದರು.
ಮುಂದಿನ ಚುನಾವಣೆಯಲ್ಲಿ ಅರವತ್ತು ಸಾವಿರ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು. ಐವತ್ತು ಸಾವಿರಕ್ಕಿಂತ ಕಡಿಮೆ ಅಂತರದಲ್ಲಿ ಬಿಜೆಪಿ ಗೆದ್ದರೆ ಅದು ಸೋಲು ಅಂದುಕೊಳ್ಳುತ್ತೇನೆ. ನನ್ನನ್ನು ನಂಬಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಜನರು ಹೋಗಿದ್ದಾರೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಜನರು ನನ್ನ ಜನರು. ಗ್ರಾಮೀಣ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನ ಮುಂದಿನ ದಿನಗಳಲ್ಲಿ ಬಿಜೆಪಿಗೆ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು. ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಆಪರೇಷನ್ ಕಮಲ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಸರ್ಕಾರದ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಉದ್ಯೋಗ ಖಾತ್ರಿ ನಾನೇ ತಂದಿದ್ದೇನೆ ಅಂತಾ ಕೆಲವರು ಹೇಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರ ತಂದಿರುವುದು ಎಂದು ಹೇಳಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟಿದ್ದಾರೆ.
ಗೋಕಾಕ್ ಗೆ ಕೊಟ್ಟಷ್ಟು ಅನುದಾನ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನೀಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದೆ. ಗ್ರಾಪಂ ಸದಸ್ಯರು ಒಟ್ಟಾಗಿ ಕೆಲಸ ಮಾಡಿ ಕ್ಷೇತ್ರ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಮಾತಾಡಿದರೆ ಆ ಕೆಲಸ ಮಾಡುತ್ತಾರೆ. ನೀವೆಲ್ಲಾ ಹುಲಿ ಜತೆಗೆ ಇರೀ ಕುರಿ ಜತೆಗೆ ಇರಬೇಡಿ ಎಂದು ಹೇಳುವ ಮೂಲಕವಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್, ಶಾಸಕಿ ಹೆಬ್ಬಾಳ್ಕರ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.