ಮೈಸೂರು: ಪಕ್ಷಕ್ಕೆ ದ್ರೋಹ ಬಗೆದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ. ಸೋಮಶೇಖರ್ ಮೈಸೂರಿನಲ್ಲಿ ತಿರುಗೇಟು ನೀಡಿದ್ದಾರೆ.
ನಾವು 17 ಜನ ಪಕ್ಷ ಸೇರುತ್ತೇವೆ ಎಂದು ಅಪ್ಲಿಕೇಶನ್ ಹಾಕಿದ್ವಾ? ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗಿದ್ವಾ? ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ಗೆ ಹೋದ ಗಿರಾಕಿ, ನಾವು ಯಾರ ಹತ್ತಿರವಾದರು ಪಕ್ಷಕ್ಕೆ ಬರುತ್ತೇವೆ ಅಂತಾ ಹೇಳಿದ್ದೀವಾ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಟಿಎಸ್, ಬಿಜೆಪಿ ಪಕ್ಷ ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದೆ. ನಾವು ಗೌರವಯುತವಾಗಿ ಸರ್ಕಾರ ಮತ್ತು ಪಕ್ಷದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರ ನಡುವೆ ಸಮನ್ವಯತೆ ಇಲ್ಲ. ಒಬ್ಬರು ಹೊಡೆದ ರೀತಿ ಒಬ್ಬರು ಅಳುವ ರೀತಿ ಮಾಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಎರಡು ವರ್ಷ ಬಿಟ್ಟು ಡಿಕೆಶಿ ಸಿಎಂ ಆಗ್ತಾರೆ: ನಲಪಾಡ್
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಎಸ್.ಟಿ. ಸೋಮಶೇಖರ್ ನನ್ನ ಸಂಪರ್ಕದಲ್ಲಿದ್ದಾರೆ ಹೇಳಿಕೆಗೆ ಉತ್ತರಿಸಿ, ನಾನು ಯಾವತ್ತು ಡಬಲ್ ಗೇಮ್ ರಾಜಕಾರಣ ಮಾಡಿಲ್ಲ. ಹಾದಿಯಲ್ಲಿ ಬೀದಿಯಲ್ಲಿ ಗೌರವಯುತವಾಗಿ ನಡೆದುಕೊಳ್ಳಬೇಕು, ಇದಷ್ಟೇ ನಾನು ಹೇಳಿದ್ದೇನೆ. ಒಂದು ಸೀಟು ಇದ್ದಾಗಲಿಂದಲೂ ಯಡಿಯೂರಪ್ಪ ಹೋರಾಟ ಮಾಡಿದ್ದಾರೆ. ಅದಕ್ಕೆ ಗೌರವ ಕೊಡಿ ಎಂದು ಹೇಳಿದ್ದೇನೆ ಎಂದು ಅಭಿಪ್ರಾಯಪಟ್ಟರು.