ಮಡಿಕೇರಿ: ರಾಜ್ಯ ಸರ್ಕಾರ ಮೆಡಿಕಲ್ ಕಿಟ್ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಸಿದ್ದರಾಮಯ್ಯನವರು ಹೇಳುವ ಮೂಲಕ ಹಿಟ್ ರನ್ ಕೆಲಸ ಮಾಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮಾಜಿ ಸಿಎಂಗೆ ತಿರುಗೇಟು ನೀಡಿದ್ದಾರೆ.
ಕೊರೊನಾ ಸಂಬಂಧ ಮಡಿಕೇರಿಯಲ್ಲಿ ಪ್ರಗತಿ ಪರಿಶೀಲಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಸರ್ಕಾರ ಮೆಡಿಕಲ್ ಕಿಟ್ ಅನ್ನು ಖರೀದಿಯನ್ನೇ ಮಾಡಿಲ್ಲ. ಅವ್ಯವಹಾರ ಹೇಗೆ ನಡೆಯುತ್ತದೆ, ಇದು ಸುಮ್ಮನೇ ಮಾಡಿರುವ ಆರೋಪ ಎಂದು ಟೀಕಿಸಿದರು.
ಅವ್ಯವಹಾರ ಆಗಿದೆ ಎಂದಾಗಲೇ ಸಿಎಂ ಅವರು ಸಿದ್ದರಾಮಯ್ಯನವರಿಗೆ ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಖರೀದಿಯಲ್ಲಿ ಅವ್ಯವಹಾರ ಆಗಿದೆ ಎನ್ನೋ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯನವರು ಸಭೆಗೆ ಹೋಗದೆ ಕೇವಲ ಹಿಟ್ ಅಂಡ್ ರನ್ ಕೆಲಸ ಮಾಡುತ್ತಿದ್ದಾರೆ. ಆ ರೀತಿ ಯಾವುದೇ ದಾಖಲೆಗಳಿದ್ದರೆ ತೋರಿಸಲಿ ಎಂದು ಸವಾಲು ಎಸೆದರು.
ಕೊರೊನಾ ಸಂದಿಗ್ಧ ಸಂದರ್ಭದಲ್ಲಿ 500 ರಿಂದ 600 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಆದರೆ ಈ ಹಣದಲ್ಲಿ ಸರ್ಕಾರ ಒಂದೇ ಒಂದು ರೂಪಾಯಿ ಅವ್ಯವಹಾರ ಮಾಡಿಲ್ಲ. ಆದರೂ ಹೀಗೆ ಸುಮ್ಮನೇ ಆರೋಪ ಮಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಕೂಡ 5 ವರ್ಷ ಮುಖ್ಯಮಂತ್ರಿಗಳಾಗಿದ್ದರೂ, ಹಣ ಹೆಚ್ಚುವರಿ ಖರ್ಚು ಮಾಡದೆ ಇದ್ದರೂ ಅವ್ಯವಹಾರ ಹೇಗೆ ಆಗುತ್ತೆ ಎಂದು ಅವರೇ ಚಿಂತನೆ ನಡೆಸಬೇಕು ಎಂದು ಸಚಿವ ಸೋಮಣ್ಣ ಹೇಳಿದರು.