– ಮಹಾರಾಷ್ಟ್ರ ಸಿಎಂ ಹೇಳಿಕೆಗೆ ರವಿ ಪ್ರತಿಕ್ರಿಯೆ
ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಲವು ವೇಳೆ ಅವರ ಮೂಲದ ಬಗ್ಗೆ ಡೌಟ್ ಬರುತ್ತೆ. ಸಿದ್ದರಾಮಯ್ಯಗೆ ಬಹಳ ಸಲ ತನ್ನ ಮೂಲದ್ದೇ ಸಂಶಯ ಕಾಡ್ತಿರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರದ್ದು ಜಿನ್ನಾ ವಾದ ಆಗುತ್ತೆ, ಗಾಂಧಿ ವಾದ ಆಗಲ್ಲ. ಒಮ್ಮೆ ನಾನು ಹಿಂದೂ ಅಂತಾರೆ, ಆಮೇಲೆ ನನಗೂ ಹಿಂದೂಗೂ ಸಂಬಂಧವಿಲ್ಲ ಅಂತಾರೆ. ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಗಾಂಧಿ ದನದ ಮಾಂಸ ತಿನ್ನಿ ಅಂತ ಹೇಳಿದ್ರಾ. ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು ಗೋ ಮಾಂಸ ತಿಂತೀನಿ ಅನ್ನೋರು ಗಾಂಧಿ ಹಿಂದುತ್ವ ಹೇಗಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಯಾವಾಗ ಆರ್ಎಸ್ಎಸ್ಗೆ ಬಂದ್ರು ಗೊತ್ತಿಲ್ಲ. ಆರ್ಎಸ್ಎಸ್ ಮೂಲ ತಿಳಿಯಬೇಕಂದರೆ ಇಲ್ಲಿಗೆ ಬರಬೇಕು. ಮೊದಲು ಆರ್ಎಸ್ಎಸ್ ಗೆ ಬರಲಿ ಆಮೇಲೆ ಮೂಲ ತಿಳಿಯಲಿ. ಕೆಲ ವೇಳೆ ಅವರಿಗೆ ಅವರ ಮೂಲದ ಬಗ್ಗೆ ಡೌಟ್ ಬರುತ್ತೆ. ಸಿದ್ದರಾಮಯ್ಯಗೆ ಬಹಳ ಸಲ ತನ್ನ ಮೂಲದ್ದೇ ಸಂಶಯ ಕಾಡ್ತಿರುತ್ತೆ. ಅಪ್ಪಟ ರಾಷ್ಟ್ರಭಕ್ತನಿಗೆ ಆರ್ಎಸ್ಎಸ್ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡೋರ್ಗೆ ಆರ್ಎಸ್ಎಸ್ ಮೂಲ ಗೊತ್ತಾಗಲ್ಲ. ಅವರಿಗೆ ದಿನಾ ಕನಸು ಬೀಳುತ್ತೆ ರಾತ್ರಿ ಬಿದ್ದ ಕನಸನ್ನ ಬೆಳಗ್ಗೆ ಬಂದು ಹೇಳ್ತಾರೆ ಎಂದರು.
ಇದೇ ವೇಳೆ ಮಹಾರಾಷ್ಟ್ರ ಸಿ.ಎಂ. ಉದ್ಧವ್ ಠಾಕ್ರೆ ಗಡಿ ಕ್ಯಾತೆಗೆ ಪ್ರತಿಕ್ರಿಯಿಸಿ, ಗಡಿ ವಿಚಾರವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಹಳ ಹಿಂದಿನಿಂದ ಬಂದಿದೆ. ಕನ್ನಡ ಮಾತನಾಡುವವರು ಮಹಾರಾಷ್ಟ್ರ ಗಡಿಯೊಳಗೆ ಇದ್ದಾರೆ. ಹಾಗೆಯೇ ಮಠಾಠಿ ಮಾತನಾಡುವವರು ಕರ್ನಾಟಕದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ್ದಂತೆ ಹಲವು ಆಯೋಗಗಳು ಬಂದಿದೆ. ಭಾಷಾವಾರು ಪ್ರಾಂತ್ಯವಾಗುವಾಗ ಕ್ಷೇತ್ರ ವಿಂಗಡಣೆಯಾಗಿದೆ. ಅವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸ ಭಾರತೀಯರು ಮಾಡಿಕೊಂಡು ಬಂದಿದ್ದಾರೆ ಎಂದ ಹೇಳಿದರು.
ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ತರುವ ಕೆಲಸ ನಡೆದಿಲ್ಲ. ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದು ಎಂದು ಹಲವು ವರ್ಷಗಳಿಂದ ಕೂಗು ಕೇಳಿಬರುತ್ತಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದ್ರೆ ಬಿಜೆಪಿ ಅಸ್ಥಿತ್ವದಲ್ಲಿರಲಿಲ್ಲ. ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಪ್ರಶ್ನೆ ಮಾಡಬೇಕೆ ಅಂದ್ರೆ ಅವ್ರು ಬೆಂಬಲಿತದಿಂದ ಅಧಿಕಾರ ನಡೆಸುತ್ತಿದ್ದರಲ್ಲ ಆ ಪಕ್ಷದ ವಿರುದ್ಧ ಪ್ರಶ್ನೆ ಮಾಡಬೇಕು. ಆಗ ಉದ್ಧವ್ ಠಾಕ್ರೆಯೂ ಹುಟ್ಟಿರಲಿಲ್ಲ, ನಾನೂ ಹುಟ್ಟಿರಲಿಲ್ಲ. ಕಾಂಗ್ರೆಸ್ ಹೆಗಲ ಮೇಲೆ ಕೂತು ಅವರು ಹೀಗೆ ಮಾತನಾಡ್ತಾರೆ. ನೈತಿಕತೆ ಇದ್ರೆ ಅವ್ರಿಗೆ ಅನ್ಯಾಯ ಮಾಡಿದ ಹೆಗಲಿನಿಂದ ಕೆಳಗಿಳಿಯಲಿ ಎಂದು ವಾಗ್ದಾಳಿ ನಡೆಸಿದರು.