ಕೋಲಾರ: ಸಿಡಿ ಸಂತ್ರಸ್ತೆ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿದ್ದು, ಸಂತ್ರಸ್ತೆ ನೆರವಿಗೆ ನಾವಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸಪುರ ತಾಲೂಕಿನ ಅಧಿಕಾರಿಗಳ ಜೊತೆ ಕರೆದಿದ್ದ ಸಭೆಗೂ ಮುನ್ನ ರಮೇಶ್ ಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿ ಪಾಪ ಆಕೆ ಮನವಿ ಮಾಡಿದ್ದಾಳೆ. ಸಾರ್ವಜನಿಕ ಜೀವನದಲ್ಲಿರುವ ನಾವು, ಆಕೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವುದು ಕರ್ತವ್ಯ ಎಂದರು.
ಈಗಾಗಲೇ ಅಸೆಂಬ್ಲಿಯಲ್ಲಿ ಸಂತ್ರಸ್ತೆಯ ರಕ್ಷಣೆ ಕುರಿತು ಮಾತನಾಡಿದ್ದು, ಖಂಡಿತಾ ಆಕೆಗೆ ರಕ್ಷಣೆ ಒದಗಿಸುತ್ತೇವೆ. ಆಕೆ ಹೆದರಬೇಕಾಗಿಲ್ಲ, ನಮ್ಮದೇನು ಅನಾಗರಿಕ ಸಮಾಜವೇನಲ್ಲ. ಒಂದು ಹೆಣ್ಣು ಮಗಳು ಸಂಕಷ್ಟದಲ್ಲಿದ್ದು ಸಹಾಯ ಕೇಳಿದ್ದಾಳೆ ಅಂದರೆ ಆಕೆಯ ನೆರವಿಗೆ ನಾವು ನಿಲ್ಲುತ್ತೇವೆ. ಸದಾ ಸಾರ್ವಜನಿಕ ಜೀವನದಲ್ಲಿರುವ ನಾವು ಯಾರೇ ಸಹಾಯ ಕೇಳಿದರೂ ಅವರ ಸಹಾಯಕ್ಕೆ ನಿಲ್ಲುತ್ತೇವೆ. ಎಸ್ಐಟಿ ಮುಂದೆ ಹೇಳಿಕೆ ನೀಡಲು ಒತ್ತಡ ಇದ್ದರೆ, ನ್ಯಾಯಾಧೀಶರ ಎದುರು ಹೇಳಿಕೆ ನೀಡಲಿ. ಆಗ ಅದು ಅಧಿಕೃತವಾಗುತ್ತದೆ ಎಂದು ಸಲಹೆ ನೀಡಿದರು.
ಸದ್ಯ ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ. ಧೈರ್ಯವಾಗಿ ಬಂದು ಹೇಳಿಕೆ ನೀಡಲಿ ಎಂದ ಅವರು, ನನಗೂ ಒಂದು ಹೆಣ್ಣು ಮಗಳಿದ್ದಾಳೆ. ಆಕೆಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಲ್ಲವೇ. ಸಿಡಿ ಯುವತಿಗೆ ವಿಶೇಷ ರಕ್ಷಣೆ ನೀಡುವುದಕ್ಕೆ ನಾನು ಗೃಹಮಂತ್ರಿ ಅಲ್ಲ. ನಮ್ಮ ಕೆಲಸವನ್ನ ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುತ್ತೇವೆ. ಗೌರವಯುತವಾಗಿ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ಸಿನಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತಿದೆಯಲ್ಲಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ 71 ವರ್ಷ ವಯಸ್ಸಾಗಿದೆ. ಡಿಕೆಶಿ ನನ್ನ ತಮ್ಮ ಇದ್ದ ಹಾಗೆ, ಸಿದ್ದರಾಮಯ್ಯ ನನ್ನ ನಾಯಕರು ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ರು.