ಬೆಂಗಳೂರು: ಮಾಜಿ ಸಚಿವರ ಸಿಡಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಕೆಲ ಪದಗಳು ಹೆಚ್ಚು ಬಳಕೆಯಾಗಿವೆ. ಈಗ ಈ ಪ್ರಕರಣಕ್ಕೆ ಬಳಕೆಯಾದ ಸಿಡಿ ಲೇಡಿ ಟೈಟಲ್ ಪಡೆಯಲು ಒಡೆಯ ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.
ಸಂದೇಶ್ ಫಿಲಂಸ್ ಅರ್ಜಿ ಸಲ್ಲಿಸಿದ್ದು ಸಿಡಿ ಲೇಡಿ ಶೀರ್ಷಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿದೆ. ಯಾವುದೇ ಟೈಟಲ್ ರಿಜಿಸ್ಟರ್ ಆಗಬೇಕಾದರೆ ಫಿಲ್ಮ್ ಚೇಂಬರ್ ನಲ್ಲಿ ಸಭೆ ಕರೆದು ಪರ ವಿರೋಧ ಒಳಿತು ತೀರ್ಮಾನಿಸಿ ಒಕ್ಕೊರಲಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣಗಳ ಜೊತೆಯಲ್ಲಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಪ್ರಕರಣಗಳು ವರದಿಯಾದಾಗ ಮಾಧ್ಯಮಗಳಲ್ಲಿ ಹೆಚ್ಚು ಬಳಕೆಯಾದ ಪದಗಳನ್ನ ಶೀರ್ಷಿಕೆ ನೀಡುವಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಅದೇ ರೀತಿ ಕೆಲವರು ಫನ್ನಿ ಟೈಟಲ್ ಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ.