ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ವಾಸದಲ್ಲಿರುವ ಸಿಡಿ ಲೇಡಿ ಇದೀಗ ಇಂದು ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವೀಡಿಯೋದಲ್ಲಿ ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.
24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದೇನೆ ಎಂದು ಸಿಡಿ ಲೇಡಿ ಹೇಳಿದ್ದಾರೆ.
ನಿನ್ನೆಯಷ್ಟೇ ವೀಡಿಯೋ ಬಿಡುಗಡೆ ಮಾಡಿರುವ ಈಕೆ, ನಮ್ಮ ಅಪ್ಪ, ಅಮ್ಮ ಸ್ವ-ಇಚ್ಛೆಯಿಂದ ದೂರು ನೀಡಿಲ್ಲ ಅನ್ನೋದು ನನಗೆ ನೂರಕ್ಕೆ ನೂರರಷ್ಟು ಗೊತ್ತು. ಮಗಳು ತಪ್ಪು ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ. ನನಗೆ ಅಪ್ಪ, ಅಮ್ಮನ ಸುರಕ್ಷತೆ ಮುಖ್ಯ. ಅವರು ಸೇಫ್ ಆಗಿದ್ದರೆ ಅನ್ನೋದು ಖಾತ್ರಿಯಾದಾಗ ಎಸ್ಐಟಿ ಮುಂದೆ ಬಂದು ಹೇಳಿಕೆ ದಾಖಲಿಸುತ್ತೇನೆ ಎಂದಿದ್ದರು.
ಎಸ್ಐಟಿ ಯಾರ ಪರ?:
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ-ತಾಯಿಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ನನಗೆ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ನಾನು ಮಾರ್ಚ್ 12 ರಂದು ವೀಡಿಯೋ ಹೇಳಿಕೆಯನ್ನ ಎಸ್ಐಟಿಗೆ ನೀಡಿದ್ದೆ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು ದೂರು ದಾಖಲಿಸಿದ ಅರ್ಧ ಗಂಟೆಯಲ್ಲಿ ನನ್ನ ವೀಡಿಯೋ ಹೊರಗೆ ಬಿಡುತ್ತಾರೆ. ಎಸ್ಐಟಿ ಯಾರ ಪರ ಕೆಲಸ ಮಾಡುತ್ತಿದ್ದಾರೆ ಅನ್ನೋದು ಅರ್ಥ ಆಗ್ತಿಲ್ಲ. ಅಧಿಕಾರಿಗಳು ಯಾರನ್ನ ಸೇಫ್ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಎಸ್ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.