– ನನ್ನ ಗೌರವ ಯೋಗ್ಯತೆಗೆ ಒಳ್ಳೆಯದಲ್ಲ
ಕೋಲಾರ: ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ನನ್ನೇನೂ ಕೇಳಬೇಡಿ. ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ನನಗಿಲ್ಲ, ಕಾನೂನು ರೀತಿ ನಡೆಯುತ್ತೆ. ಹೆಚ್ಚು ಆಸಕ್ತಿಯಿಂದ ವ್ಯಾಖ್ಯಾನ ಮಾಡೋದು ನನ್ನ ಯೋಗ್ಯತೆ, ಗೌರವಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ನಗರದ ನಿರ್ಮಿತಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆದರೂ ಆಗ್ರಹ ಮಾಡಬಹುದು, ಯಾರಾದರು ಮಾಡಬಹುದು. ಅಧಿವೇಶನ ಸಮಯದಲ್ಲಿ ನ್ಯಾಯವಾಗಿ ಮಾತನಾಡಿದ್ದೇನೆ ಎಂದರು.
ಸಂತ್ರಸ್ತೆ ಕೋರ್ಟ್ ಮುಂದೆ ಬಂದ ಮೇಲೆ ಎಲ್ಲಾ ಮುಗೀತು, ಇನ್ನು ಕೋರ್ಟ್ ಆಯ್ತು ಅವರಾಯ್ತು ಅಷ್ಟೆ. ನ್ಯಾಯಾಂಗವೇ ಸಂತ್ರಸ್ತೆಗೆ ಅವಕಾಶ ನೀಡಿದೆ. ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು. ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರಲ್ಲ, ಮನುಷ್ಯ ಅಂದಮೇಲೆ ಚಪಲ ಇರುತ್ತೆ. ಪಂಚೇದ್ರಿಯಗಳು ಕೆಲಸ ಮಾಡುತ್ತವೆ, ಇದೆಲ್ಲಾ ಕಾಮನ್ ರೀ, ದೊಡ್ಡ ವಿಚಾರವೇ ಅಲ್ಲ, ಜನರ ಕಷ್ಟ ಯಾರೂ ಮಾತಾಡಲ್ಲ. ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಶಿಕ್ಷೆ ಕೊಡುತ್ತೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆದ ಕುರಿತು ಮಾತನಾಡಿದ ಅವರು, ಚಪ್ಪಲಿ ಹಳೆಯದಾಗಿತ್ತೇನೋ ಇರಲಿ ಬಿಡಿ, ಕಾರ್ಪೊರೇಷನ್ನವರು ಕ್ಲೀನ್ ಮಾಡ್ತಾರೆ ಎಂದು ವ್ಯಂಗ್ಯವಾಗಿ ಉತ್ತರ ನೀಡಿದರು.