ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಹೊಸ ಬಾಂಬ್ ಸಿಡಿಸಿದ್ದು, ಸಿಡಿ ತೋರಿಸಿ ಬ್ಲ್ಯಾಕ್ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ, ಪ್ರಾಮಾಣಿಕತನವನ್ನು ಸಿಎಂ ಪರಿಗಣಿಸಲಿಲ್ಲ. ಕಳೆದ ಮೂರು ತಿಂಗಳಿಂದ ಈ ಮೂವರು ಸಿಡಿ ಇಟ್ಟುಕೊಂಡು ಸಿಎಂ ಯಡ್ಡಿಯೂರಪ್ಪನವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಹೀಗಾಗಿ ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಒಬ್ಬರು ಸಿಡಿ ಜೊತೆ ಸಿಎಂ ಪುತ್ರ ವಿಜಯೇಂದ್ರಗೆ ಹಣ ನೀಡಿ ಸಿಎಂ ಕಾರ್ಯದರ್ಶಿ ಆಗಿದ್ದಾರೆ. ಇದು ಅಪವಿತ್ರ ಸಂಪುಟ ವಿಸ್ತರಣೆ. ಸಿಎಂ ವೀರಶೈವ ಲಿಂಗಾಯತ ಸಮಾಜ ತಲೆ ತಗ್ಗಿಸುವಂಥ ಕೆಲಸ ಮಾಡಿದ್ದಾರೆ ಎಂದು ಸಿಎಂ ಯಡ್ಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ಅಸಮಧಾನ ಸ್ಫೋಟಿಸಿದ್ದಾರೆ.
ವೀರಶೈವ ಲಿಂಗಾಯತ ಸಮಾಜ ನಿಮ್ಮ ಹಿಂದೆ ಇಲ್ಲ. ಇಡೀ ವೀರಶೈವ ಸಮಾಜ ನಮ್ಮ ಹಿಂದಿದೆ. ಕೇಂದ್ರ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಿ. ಇವತ್ತಿನಿಂದ ನಿಮ್ಮ ಅಂತ್ಯ ಪ್ರಾರಂಭವಾಗಿದೆ. ಕರ್ನಾಟಕದಲ್ಲಿ ಮತ್ತೆ ಮೋದಿಯವರ ನೇತೃತ್ವದಲ್ಲಿ ಹೊಸ ಯುಗ ಪ್ರಾರಂಭವಾಗುತ್ತೆ ಎಂಬ ವಿಶ್ವಾಸ ವಿದೆ ಎಂದು ಸಿಎಂ ಯಡ್ಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ, ವಿಜಯೇಂದ್ರ ಕಾಂಗ್ರೆಸ್ ಮುಖಂಡರನ್ನು ಖರೀದಿ ಮಾಡಿದ್ದಾರೆ. ಕಾಂಗ್ರೆಸ್ ಸತ್ತಿದೆ, ವಿರೋಧ ಪಕ್ಷ ಇಲ್ಲ. ಎಲ್ಲವೂ ಹೊಂದಾಣಿಕೆ ಇದೆ. ಸಿದ್ದರಾಮಯ್ಯ, ಡಿಕೆಶಿ, ಜಮೀರ್, ಕೆ.ಜೆ.ಜಾರ್ಜ್ ಇವರು ಯಡಿಯೂರಪ್ಪನವರ ಜೊತೆ ಇದ್ದಾರೆ. ಹಿಂದೂಗಳ ದೇವರನ್ನ ಅಪಮಾನ ಮಾಡಿದವರು ಇಂದು ಸಚಿವರಾಗುತ್ತಿದ್ದಾರೆ. ರಾಮನ ಬಗ್ಗೆ, ಸೀತೆಯ ಬಗ್ಗೆ ಅಸಹ್ಯಕರವಾಗಿ ಸಂದೇಶ ಕಳುಹಿಸಿದವರು ಇಂದು ಮಂತ್ರಿ ಆಗುತ್ತಿರುವುದು ದುರ್ದೈವ. ಇದು ಅಂತ್ಯ ಕಾಲ, ವಿನಾಶ ಕಾಲೆ ವಿಪರೀತ ಬುದ್ಧಿ. ಈ ಕೆಲಸದಲ್ಲಿ ಯಡಿಯೂರಪ್ಪ ಹೋಗುತ್ತಿದ್ದಾರೆ ಎಂದು ಗುಡುಗಿದ್ದಾರೆ.