ದಾವಣಗೆರೆ: ಸಿಡಿ ಕೈಯಲ್ಲಿ ಇದ್ದರೆ ಬಿಡುಗಡೆ ಮಾಡಲಿ. ಸಿಡಿ ಇದೆ ಎಂದು ಗೊಂದಲ ಸೃಷ್ಟಿಸುವುದು ಬೇಡ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಯತ್ನಾಳ್ ಸಿಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿ.ಡಿ ಇದ್ದಿದ್ದೇ ಆದರೆ ಅದನ್ನು ಬಿಡುಗಡೆ ಮಾಡಲಿ. ಸುಳ್ಳು, ಆಧಾರರಹಿತ ಆರೋಪ ಮಾಡುವುದು ಬೇಡ ಎಂದು ತಿಳಿಸಿದ್ದಾರೆ.
ಇನ್ನು ಸಚಿವ ಸ್ಥಾನ ಕೈ ತಪ್ಪಿದ ಕುರಿತು ಮಾತನಾಡಿದ ಶಾಸಕರು, ಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯ. ಪಕ್ಷ, ಸಂಘಟನೆ, ಕ್ಷೇತ್ರದ ಬಗ್ಗೆ ನಾನು ತಲೆಕಡಿಸಿಕೊಳ್ಳುತ್ತೇನೆ. ಸಚಿವ ಸ್ಥಾನ ಬಗ್ಗೆ ಚರ್ಚೆ ಬೇಡ ಕಾಲ ಕೂಡಿ ಬರುತ್ತೆ. ಎಲ್ಲದಕ್ಕೂ ದೈವ ಕೃಪೆ ಬೇಕು ಅದು ಬರುತ್ತೆ. ಯಾವಾಗ ಕಾಲ ಕೂಡಿ ಬರುತ್ತೆ ನೋಡೊಣ. ನನಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾರಣ ಏನೂ ಇಲ್ಲ. ಆದರೂ ಯಾಕೆ ಕೈ ಬಿಟ್ಟರು ಗೊತ್ತಿಲ್ಲ. ಸಮಯ ಬಂದಾಗ ಎಲ್ಲಾ ಸರಿ ಹೋಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರ ಸಿಗಲಿಲ್ಲ ಅಂತ ಆರೋಪ-ಪ್ರತ್ಯಾರೋಪ ಮಾಡಲ್ಲ. ವರಿಷ್ಟರು, ಸಿಎಂ ಅವರು ನನಗೆ ಸಚಿವ ಸ್ಥಾನ ನೀಡಲು ಬದ್ಧ ಇದ್ದಾರೆ. ಎಲ್ಲದಕ್ಕೂ ಕಾಲ ಕೂಡಿ ಬರುತ್ತೆ. ಸದ್ಯಕ್ಕೆ ಕ್ಷೇತ್ರದ ಖುಣ ತೀರಿಸಲು ಗಮನ ಕೊಡುತ್ತೇನೆ. ಸಿಎಂ ಹೇಳಿದ್ದಾರೆ ಅವರ ಮೇಲೆ ನಂಬಿಕೆ ಇದೆ. ಕಾರಣಾಂತರ ವಿಳಂಬ ಆಗಿದೆ ಅಷ್ಟೆ, ಎಲ್ಲಾ ಸರಿ ಹೋಗುತ್ತೆ ಎಂದರು.
ವೀಕ್ ಸಿಎಂ ಹೇಳಿಕೆ ಬಗ್ಗೆ ಮಾತನಾಡಿದ ಅವರು, ರಾಜಕೀಯವಾಗಿ ಆರೋಪ ಇದ್ದಿದ್ದೇ, ಈ ರೀತಿ ಮಾತನಾಡಲೇಬೇಕು. ಈ ರೀತಿ ಮಾತನಾಡಿದರೆ ಅವರು ರಾಜಕೀಯದಲ್ಲಿ ಇದ್ದಾರೆ ಅಂತ ಅರ್ಥ. ಆದರೆ ಆಧಾರ ಇಟ್ಟುಕೊಂಡು ಮಾತನಾಡಬೇಕು. ಊಹಾಪೋಹ ಮಾತನಾಡೊದು ಬೇಡ. ಸುಭದ್ರ ಸರಕಾರ ಇರುತ್ತೆ ಅಂತ ಅರುಣ್ ಸಿಂಗ್ ಅವರೇ ಹೇಳಿದ್ದಾರೆ. ಸಿಎಂ ಬದಲಾವಣೆ ಆಗಲ್ಲ ಬಿಎಸ್ ವೈ ಅವರೇ ಮುಂದುವರಿಯುತ್ತಾರೆ.