ಹಾವೇರಿ, ಕೋಲಾರ: ರಾಜ್ಯದ ಕೆಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೋಲಾರದ ಗಡಿ, ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿದ್ದರೆ, ಹಾವೇರಿಯಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಗ್ರಾಮದ ರೈತ ರಾಮಕೃಷ್ಣ ಹಾಗೂ ಇಬ್ಬರು ಪುತ್ರಿಯರು, ಒಂದು ಹಸು ಸಾವನ್ನಪ್ಪಿದೆ.
ತಂದೆ ರಾಮಕೃಷ್ಣ (52), ಎಂಟೆಕ್ ಮಾಡುತ್ತಿದ್ದ ಮಕ್ಕಳಾದ ರಮಾದೇವಿ(24), ಮೀನಾ (22) ಮೃತ ದುರ್ದೈವಿಗಳು. ತೋಟದ ಮನೆ ಬಳಿ ಹಸುವಿನ ಹಾಲು ಕರೆಯುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಸಿಡಿಲಾಘಾತದಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಸೇರಿದಂತೆ ಆಂಧ್ರದ ಗಡಿಯಲ್ಲಿ ಕಳೆದ 3 ದಿನಗಳಿಂದ ಮಳೆರಾಯನ ಅರ್ಭಟ ಜೋರಾಗಿದ್ದು, ಗುಡುಗು, ಬಿರುಗಾಳಿ ಸಹಿತ ಜೋರು ಮಳೆಗೆ 3 ದಿನಗಳಿಂದ ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ.
ಇತ್ತ ಹಾವೇರಿಯಲ್ಲಿ ಸಿಡಿಲು ಬಡಿದು ತೆಂಗಿನಮರಕ್ಕೆ ಬೆಂಕಿ ಬಿದ್ದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಏಳುಕೋಟೆಪ್ಪ ಅವರ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು, ಹೊತ್ತಿ ಉರಿದಿದೆ.