– ಬೆಂಗ್ಳೂರು ಅಭಿವೃದ್ಧಿಗಾಗಿ 7,795 ಕೋಟಿ ರೂ. ಅನುದಾನ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2020-21ನೇ ಸಾಲಿನ ರಾಜ್ಯ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ. ತಮ್ಮ ಬಜೆಟ್ ನಲ್ಲಿ ಸಿಎಂ, ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ 7,795 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ.
ನಗರದ ಮಲ್ಲೇಶ್ವರದಲ್ಲಿ ಮೈಸೂರು ಲ್ಯಾಂಪ್ಸ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ ‘ಎಕ್ಸ್ ಪಿರೀಯನ್ಸ್ ಬೆಂಗಳೂರು’ ಕೇಂದ್ರ ಅಭಿವೃದ್ಧಿ ಬೈಯಪ್ಪನಹಳ್ಳಿಯಲ್ಲಿರುವ ಎನ್ಜಿಎಎಫ್ ನಲ್ಲಿ ಹಾಗೂ ಇನ್ನೂ ಮೂರು ಕಡೆಗಳಲ್ಲಿ ವೃಕ್ಷೋದ್ಯಾನಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ.
ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. 14,788 ಕೋಟಿ ರೂ. ಅಂದಾಜು ವೆಚ್ಚದಲ್ಲಿ 58.2 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆ- ಏರ್ ಪೋರ್ಟ್ ಮೆಟ್ರೋ ಜಾಲ ಹಂತ 2ಎ ಮತ್ತು 2ಬಿ ಅನುಷ್ಠಾನ ಮಾಡಲಾಗುವುದು. ಉಪನಗರ ರೈಲು ಯೋಜನೆಗೆ 2021-22ನೇ ಸಾಲಿಗೆ 850 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕಟ್ಟಡ ನಿರ್ಮಾಣ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಗರಿಷ್ಠ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯ 60 ದಶ ಲಕ್ಷಕ್ಕೆ ಹೆಚ್ಚಳಗೊಳಿಸಲಾಗಿದ್ದು, ಕೋರಮಂಗಲ ಕಣಿವೆಯನ್ನ ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲು 169 ಕೋಟಿ ರೂ. ವೆಚ್ಚದಲ್ಲಿ ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ (ಕೆ-100) ಯೋಜನೆ ಅನುಷ್ಠಾನಕ್ಕೆ ತರಲಾಗುವುದು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತರಾಷ್ಟ್ರೀಯ ಮಟ್ಟದ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ಅಭಿವೃದ್ಧಿ, ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಬಿಬಿಎಂಪಿ ಸಹಯೋಗದೊಂದಿಗೆ 450 ಕೋಟಿ ವೆಚ್ಚದಲ್ಲಿ ಕೆಸಿ ವ್ಯಾಲಿ ಆವರಣದ 248 ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
ಒಂದು ರಾಷ್ಟ್ರ, ಒಂದು ಕಾರ್ಡ್ ಜಾರಿ: ಆಗಸ್ಟ್ 2021ರೊಳಗೆ ‘ಒಂದು ರಾಷ್ಟ್ರ, ಒಂದು ಕಾರ್ಡ್’ ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಆಟೋಮೆಟಿಕ್ ಫೇರ್ ಕಲೆಕ್ಷನ್ ಸಿಸ್ಟಮ್ ಯೋಜನೆ ಅನುಷ್ಠಾನ. ಬೆಂಗಳೂರು ನಗರದ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಯನ್ನ ನಿರ್ವಹಿಸಲು ಪ್ರತ್ಯೇಕ ಕಂಪನಿ ಸ್ಥಾಪನೆ. ಉತ್ತರ ಬೆಂಗಳೂರಿನಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊಳಿಸಲಾಗುವುದು.
28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಹಾಗೂ ಆರ್ಗನ್ ಟ್ರಾನ್ಸ್ ಪ್ಲಾಂಟ್ ಸಂಸ್ಥೆ ಪ್ರಸಕ್ತ ಸಾಲಿನಲ್ಲಿ ಕಾರ್ಯಾರಂಭಗೊಳ್ಳಲಿದೆ. ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 20 ಕೋಟಿ ರೂ.ಗಳ ವೆ ಚ್ಚದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ, ಬಿಬಿಎಂಪಿಯ 57 ವಾರ್ಡ್ ಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. 33 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲೆಗಳ ನವೀಕರಣ ಮತ್ತು ಪುನರ್ ನಿರ್ಮಾಣ, ಬೆಂಗಳೂರಿನ ಮಲ್ಲತ್ತಹಳ್ಲಿ ಕಲಾಗ್ರಾಮದಲ್ಲಿ ಪ್ರತಿ ವಾರಂತ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜಿಸಲು 2 ಕೋಟಿ ರೂ. ಮೀಸಲಿಡಲಾಗಿದೆ.