– ಪೈಪ್, ಕೋಲು ಬಳಸಿ ಹಲ್ಲೆ
ವಿಜಯಪುರ: ಸಿಗರೇಟ್ ಹೊಗೆ ವಿಚಾರದಲ್ಲಿ ನಾಲ್ವರ ಮಧ್ಯೆ ಗಲಾಟೆ ನಡೆದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪಗಿ ಪಟ್ಟಣದ ಹೊರ ಭಾಗದ ದಾಬಾದಲ್ಲಿ ನಡೆದಿದೆ. ಫೆಬ್ರುವರಿ 22ರ ರಾತ್ರಿ ಗಲಾಟೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸತೀಶ್ ಬೂದಿಹಾಳ ಮತ್ತು ಈಶ್ವರ್ ಸವದಿ ಸಿಗರೇಟ್ ಸೇದಿ ದಿಲೀಪ್ ಚವ್ಹಾಣ್, ಮಹಾಂತೇಶ್ ಚವ್ಹಾಣ್ ಮುಂದೆ ಹೊಗೆ ಬಿಟ್ಟಿದ್ದಾರೆ. ಇದೇ ವಿಚಾರಕ್ಕೆ ನಾಲ್ವರ ಮಧ್ಯೆ ದಾಬಾದಲ್ಲಿ ಗಲಾಟೆ ನಡೆದಿದೆ. ಈ ಸಂಬಂಧ ದೇವರ ಹಿಪ್ಪರಗಿ ಠಾಣೆಗೆ ದೂರು ಸಲ್ಲಿಸಲು ದಿಲೀಪ್, ಮಹಾಂತೇಶ್ ಮುಂದಾಗಿದ್ದರು. ಈ ವೇಳೆ ಠಾಣೆಗೆ ಬಂದ ಬಿಜೆಪಿ ಮುಖಂಡ ರಮೇಶ್ ಮಸಬಿನಾಳ ಸಂಧಾನ ಮಾಡಿಸೋದಾಗಿ ಹೊರ ಕರೆತಂದ ಹಲ್ಲೆ ನಡೆಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.
ಹಲ್ಲೆಗೊಳಗಾದ ದಿಲೀಪ್ ಮತ್ತು ಮಹಾಂತೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಅಲ್ಲಿಗೆ ಬಂದ ಆರು ಜನರ ಗುಂಪು ಪೈಪ್, ಕೋಲು, ಕ್ಯಾನ್ ಬಳಸಿ ಇಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ದೃಶ್ಯಗಳು ಆಸ್ಪತ್ರೆಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಇಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಫೆಬ್ರವರಿ 22ರಂದು ದೂರು ನೀಡಿದ್ರೂ ಪೊಲೀಸರು ಆರೋಪಿಗಳನ್ನ ಬಂಧಿಸಿಲ್ಲ. ರಮೇಶ್ ಮಸಬಿನಾಳ ಒತ್ತಡದಿಂದಾಗಿ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗುತ್ತಿಲ್ಲ ಎಂದು ಹಲ್ಲೆಗೊಳಗಾದ ಮಹಾಂತೇಶ್, ದಿಲೀಪ್ ಪೋಷಕರು ಆರೋಪಿಸುತ್ತಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಇಲ್ಲದಿದ್ದg ಪೊಲೀಸ್ ಠಾಣೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.