– 2022ರ ಮಾರ್ಚ್ ನಲ್ಲಿ ಸಿಎಂ ಬದಲಾವಣೆ
ವಿಜಯನಗರ: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಇನ್ನೂ ಒಂದು ವಾರ ಆಗಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 6-7 ತಿಂಗಳು ಮಾತ್ರ ಅಧಿಕಾರ ನಡೆಸಲಿದ್ದಾರೆ. 2022ರ ಮಾರ್ಚ್ ನಲ್ಲಿ ಗಡ್ಡಧಾರಿ ವ್ಯಕ್ತಿ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.
ಮೈಲಾರದಲ್ಲಿ ಭರತ ಹುಣ್ಣುಮೆಯಂದು ನಡೆದ ಕಾರ್ಣಿಕದ ದೈವವಾಣಿಯನ್ನು ಮತ್ತೆ ವಿಶ್ಲೇಷಣೆ ಮಾಡಿರುವ ಅವರು, ‘ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್’ ಎಂಬುದು ದೈವವಾಣಿ ಆಗಿತ್ತು. ಮೈಲಾರ ಭವಿಷ್ಯವಾಣಿಯಂತೆ ಈಗಿರುವ ಸರ್ಕಾರದಲ್ಲಿ ಮೂವರು ಜನ ಸಿಎಂ ಆಗಿ ಮುಕ್ತಾಯ ಆಗುತ್ತೆ. ಕೆಲವೇ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದಿದ್ದಾರೆ.
ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಾವಧಿ ಪೂರ್ಣಗೊಳಿಸಲ್ಲ. ಕಳೆದ ಒಂದು ವಾರದ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. 6-7 ತಿಂಗಳು ಮಾತ್ರ ರಾಜ್ಯಭಾರ ಮಾಡುತ್ತಾರೆ. 2022ರ ಮಾರ್ಚ್ ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗುತ್ತಾರೆ ಎಂದು ವೆಂಕಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.
ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಸುಳ್ಳಾಗಿಲ್ಲ ಎಂಬ ಪ್ರತೀತಿ ಇದೆ. ಹೀಗಾಗಿ ಸಿಎಂ ಬದಲಾವಣೆ ಕುರಿತ ಈ ಮಾತು ಭಾರೀ ಸಂಚಲನ ಮೂಡಿಸಿದೆ. ಗಡ್ಡಧಾರಿ ವ್ಯಕ್ತಿ ಯಾರು? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಯಡಿಯೂರಪ್ಪನವರ ನಂತರ ನೀವೇ ಮುಖ್ಯಮಂತ್ರಿ ಆಗುತ್ತೀರಿ ಎಂದು ಹೇಳಿದ್ದೆ. ಅವರು ಒಂದು ಕ್ಷಣ ವಿಚಾರ ಮಾಡಿದರು. ದೇವರ ಆರ್ಶಿವಾದ ಇದ್ದರೇ ಆಗುತ್ತೇನೆ ಅಂದಿದ್ದರು. ಅದರಂತೆ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ ಎಂದಿದ್ದಾರೆ.
ಕೆಲವೇ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಲಿದೆ. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಿ. ಅರ್ಹರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮೈಲಾರವಾಣಿಯಲ್ಲಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.