ಬೆಂಗಳೂರು: ಚೆನ್ನೈನಲ್ಲಿರುವ ಅಮೆರಿಕ ದೂತಾವಾಸದ ಕೌನ್ಸಲ್ ಜನರಲ್ ಜ್ಯುಡಿತ್ ರೇವಿನ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಇಂದು ವರ್ಚುಯಲ್ ಸಭೆ ನಡೆಸಿದರು.
ಬೆಂಗಳೂರಿನಲ್ಲಿ ಯು.ಎಸ್.ರಾಯಭಾರಿ ಕಚೇರಿಯನ್ನು ತೆರೆಯಬೇಕೆನ್ನುವುದು ನಮ್ಮ ಬಹು ದಿನಗಳ ಬೇಡಿಕೆಯಾಗಿದ್ದು, ಕಚೇರಿಯ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು.
ಧನ್ಯವಾದಗಳು @CMofKarnataka ಬಿ.ಎಸ್.ಯಡಿಯೂರಪ್ಪ ಅವರೇ! ಈ ಸಂವಾದದಲ್ಲಿ ಕರ್ನಾಟಕ ರಾಜ್ಯ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಯೋಗ, #USIndia ವಾಣಿಜ್ಯ ಸಂಬಂಧ, ಕೋವಿಡ್ ಹೊತ್ತಿನಲ್ಲಿ ಆರೋಗ್ಯಸೇವೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದೆವು. #CGChennai ಜ್ಯುಡಿತ್ ರೇವಿನ್
— US Consulate Chennai (@USAndChennai) September 16, 2020
ಭಾರತದಲ್ಲಿರುವ 100 ಅಮೆರಿಕಾ ಸಂಸ್ಥೆಗಳ ಪೈಕಿ ಸಿಸ್ಕೋ, ಐ.ಬಿ.ಎಂ, ಇಂಟೆಲ್, ಜಿ.ಇ, ಹೆಚ್.ಪಿ, ಒರಾಕಲ್, ಯು.ಟಿ.ಸಿ ಸೇರಿದಂತೆ 90 ಕಂಪನಿಗಳು ಬೆಂಗಳೂರಿನಲ್ಲಿಯೇ ನೆಲೆಸಿವೆ. ಕರ್ನಾಟಕ ಬಂಡವಾಳ ಸ್ನೇಹಿ ರಾಜ್ಯವಾಗಿದ್ದು, ಅಮೆರಿಕದಿಂದ ಹೆಚ್ಚಿನ ಬಂಡವಾಳವನ್ನು ಸ್ವಾಗತಿಸುತ್ತೇವೆ ಎಂದು ಸಿಎಂ ಹೇಳಿದರು.
ನವೋದ್ಯಮ ಶ್ರೇಯಾಂಕದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿರುವುದಕ್ಕೆ ಮುಖ್ಯ ಮಂತ್ರಿಗಳನ್ನು ಕಾನ್ಸಲ್ ಜನರಲ್ ಅವರು ಅಭಿನಂದಿಸಿದರು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಯೋಗ, ಆರ್ಥಿಕ ವ್ಯವಹಾರಗಳ ವಿಸ್ತರಣೆ, ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ಸಂಶೋಧನೆ, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಸೇವೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಜ್ಯುಡಿತ್ ರೇವಿನ್ ಅವರು ಚರ್ಚಿಸಿದರು.
ಯು.ಎಸ್.ಕೌನ್ಸಲ್ ಜನರಲ್ ಜ್ಯುಡಿತ್ ರಾವಿನ್ ಅವರು ಇಂದು ಮುಖ್ಯಮಂತ್ರಿ @BSYBJP ಅವರೊಂದಿಗೆ ವರ್ಚುಯಲ್ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು. (1/2) pic.twitter.com/kqI0vl7MuF
— CM of Karnataka (@CMofKarnataka) September 16, 2020
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.