– ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ಅನಾವಶ್ಯಕ ಗೊಂದಲ ಸೃಷ್ಟಿ
ರಾಯಚೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಊಹಾಪೋಹಗಳಿಗೆ ರಕ್ಕೆ-ಪುಕ್ಕಗಳು ಕಟ್ಟಿ ಕಾಗೆ ಹಾರಿಸುವ ಕೆಲಸ ನಡೆದಿದೆ. ಈಗ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಇಲ್ಲ, ನಮ್ಮ ಮುಂದೆ ಇರುವುದು ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮಾಡುವುದು ಅಷ್ಟೇ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಸವದಿ, ನಮ್ಮ ಮುಂದೆ ಕೋವಿಡ್ ನಿಯಂತ್ರಣದ ವಿಚಾರ ಮಾತ್ರ ಇದೆ. ರಾಜ್ಯದಲ್ಲಿ ಜನ ಕಷ್ಟದಲ್ಲಿ ಇದ್ದಾರೆ, ಜನರನ್ನು ಕಷ್ಟದಿಂದ ಹೊರ ತರೋಣ, ಯಾವುದೇ ಗೊಂದಲ ಇದ್ದರೂ ಕೂಡ ನಮ್ಮ ವರಿಷ್ಠರು ಬಗೆಹರಿಸುತ್ತಾರೆ ಎಂದರು. ಇದನ್ನೂ ಓದಿ:ಕರ್ನಾಟಕ, ಕೇರಳ ಸಾರಿಗೆ ಹೆಸರಿನಲ್ಲಿ ಪೈಪೋಟಿ ಇಲ್ಲ – ಸವದಿ
ಕೇರಳ-ಕರ್ನಾಟಕ ಮಧ್ಯದ ಕೆಎಸ್ಆರ್ಟಿಸಿ ವಿವಾದ ವಿಚಾರದ ಬಗ್ಗೆ ಮಾತನಾಡಿದ ಸವದಿ, ಟ್ರೇಡ್ಮಾರ್ಕ್ ಕುರಿತು ವಾಜ್ಯ ಹೂಡಿದ್ದರು, ಈಗ ಕೇರಳ ಪರವಾಗಿ ಆದೇಶ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳು ಒಂದೇ ಹೆಸರಿನಲ್ಲಿ ಇರಬಾರದು ಎಂಬ ನಿಯಮವಿದೆ. ನಮ್ಮ ದೇಶದಲ್ಲಿ ಮತ್ತು ಬೇರೆ ದೇಶದಲ್ಲೂ ಈ ನಿಯಮವಿದೆ. ಕೇರಳ-ಕರ್ನಾಟಕದ್ದು ಲಾಭದಾಯಕ ಕಂಪನಿಗಳು ಅಲ್ಲ. ನಮ್ಮದು ಸಾರ್ವಜನಿಕರಿಗೆ ಸೇವೆ ನೀಡುವ ಸಂಸ್ಥೆಗಳು. ಅವರ ಹೆಸರಿನಲ್ಲಿ ನಾವು- ಲಾಭ ಮಾಡುವುದೇನೂ ಇಲ್ಲ. ಈ ವಿಚಾರದಲ್ಲಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಯಾಗಿದೆ. ನಾನು ಅಧಿಕಾರಿಗಳಿಗೆ ಆದೇಶದ ಪ್ರತಿ ಪಡೆಯಲು ಹೇಳಿದ್ದೇನೆ. ಆದೇಶದ ಪ್ರತಿ ನೋಡಿ ಕಾನೂನು ಸಲಹೆ ಪಡೆದು ಮುಂದೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ಹಂಚಿಕೊಂಡರು.