ಶಿವಮೊಗ್ಗ: ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಲಸಿಕೆ ಅಭಾವ ಉಂಟಾಗಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಕುವೆಂಪು ರಸ್ತೆಯ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಲಸಿಕಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ ಎಂದು ಸರ್ಕಾರ ಪ್ರತಿ ದಿನ ಮಾಧ್ಯಮಗಳಲ್ಲಿ ಹೇಳಿದ್ದಷ್ಟೇ ಆಯ್ತು. ಆದರೆ ಲಸಿಕೆಯನ್ನು ಸಮರ್ಪಕವಾಗಿ ನೀಡಲು ವಿಫಲವಾಗಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಬಿಕಾರಿ ಸರ್ಕಾರಗಳಾಗಿದ್ದು, ಶೀಘ್ರ ಈ ಸರ್ಕಾರ ತೊಲಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ ಆಗ್ರಹಿಸಿದರು.
ಕಾಂಗ್ರೆಸ್ ನ ಪ್ರತಿಭಟನೆಗೆ ಎಚ್ಚೆತ್ತುಕೊಂಡು ಆರೋಗ್ಯ ಇಲಾಖೆ ಇದೀಗ ಲಸಿಕೆ ನೀಡಲು ಮುಂದಾಗಿದೆ. ಪ್ರತಿಭಟನೆ ಮಾಡಿದರೆಂದು ಇಂದು ಲಸಿಕೆ ನೀಡಿ, ನಾಳೆಯಿಂದ ಮತ್ತೆ ಸ್ಥಗಿತಗೊಂಡರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.