ನವ ದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ಕೊರೊನಾ ವರದಿ ನೆಗೆಟಿವ್ ಬಂದಿದೆ. ಇಂದು ಬೆಳಗ್ಗೆ ಅರವಿಂದ್ ಕೇಜ್ರಿವಾಲ್ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಸಂಜೆ ಬಂದ ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ಖಿಚಿತಪಡಿಸಿದ್ದಾರೆ.
ಗಂಟಲು ಇನ್ಫೆಕ್ಷನ್ ಮತ್ತು ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಭಾನುವಾರ ಮಧ್ಯಾಹ್ನದ ನಂತರ ಮುಖ್ಯಮಂತ್ರಿಗಳು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಐಸೋಲೇಟೆಡ್ ಆಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಡಿಸಿಎಂ ಮನೀಷ್ ಸಿಸೋಡಿಯಾ, ಮುಖ್ಯಮಂತ್ರಿಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಮುನ್ನೇಚ್ಚರಿಕೆ ಕ್ರಮವಾಗಿ ಐಸೋಲೇಷನ್ ನಲ್ಲಿದ್ದಾರೆ ಎಂದು ಹೇಳಿದ್ದರು.
ಇಂದು ಬೆಳಗ್ಗೆ ಸಿಎಂ ಅನುಪಸ್ಥಿತಿಯಲ್ಲಿ ನಡೆದ ರಾಜ್ಯದ ಹಿರಿಯ ಅಧಿಕಾರಿಗಳು ಮತ್ತು ತಜ್ಷರು ಸಭೆ ಸಿಸೋಡಿಯಾ ಅವರ ನೇತೃತ್ವದಲ್ಲಿ ನಡೆಯಿತು. ದೆಹಲಿಯಲ್ಲಿ ಕೊರೊನಾ ಸಮುದಾಯದ ಮಟ್ಟದಲ್ಲಿ ಹಬ್ಬಿಲ್ಲ. ಇದೇ ರೀತಿ ಮುಂದುವರಿದ್ರೆ ಜುಲೈ 31ರಷ್ಟರಲ್ಲಿ ಸೋಂಕಿತರ ಸಂಖ್ಯೆ 5.5 ಲಕ್ಷದಷ್ಟು ಹೆಚ್ಚಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಇಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿ ಮಾಧವಿ ರಾಜೇ ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನು ಸಿಂಧಿಯಾರ ಪತ್ನಿ, ಮಗ ಮತ್ತು ಮಗಳ ವರದಿ ನೆಗೆಟಿವ್ ಬಂದಿದೆ. ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಸಿಂಧಿಯಾ ತಮ್ಮ ತಾಯಿಯ ಜೊತೆ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಐದು ದಿನಗಳ ಹಿಂದೆ ಗ್ವಾಲಿಯರ್ ನಲ್ಲಿ ಸಿಂಧಿಯಾ, ತಾಯಿ ಮಾಧವಿ ರಾಜೇ, ಪತ್ನಿ ಪ್ರಿಯದರ್ಶಿನಿ, ಮಗಳು ಅನನ್ಯಾ ರಾಜೇ, ಪುತ್ರ ಮಾಹಾಆರ್ಯಮನ್ ಎಲ್ಲರೂ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಇದೀಗ ವರದಿ ಬಂದಿದ್ದು, ಇಬ್ಬರಿಗೆ ಸೋಂಕು ತಗುಲಿರೋದು ಖಚಿತವಾಗಿದೆ. ರಾಜ್ಯಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿರೋ ಜ್ಯೋತಿರಾದಿತ್ಯ ಸಿಂಧಿಯಾ ಭೋಪಾಲ್ ನಲ್ಲಿ ನಾಮಪತ್ರ ಸಲ್ಲಿಕೆಯ ಬಳಿಕ ದೆಹಲಿಗೆ ತೆರಳಿದ್ದರು. ಲಾಕ್ಡೌನ್ ಸಮಯದಲ್ಲಿಯೂ ಸಿಂಧಿಯಾ ದೆಹಲಿಯಲ್ಲಿದ್ದರು.