ತುಮಕೂರು: ಸಿಆರ್ಪಿಎಫ್ ಪೇದೆಯ ಪತ್ನಿ ನೇಣುಬೀಗಿದ ಸ್ಥಿತಿಯಲ್ಲಿ ಸಾವನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಘಟನೆ ನಡೆದಿದ್ದು, 20 ವರ್ಷದ ಗೌರಮ್ಮ ಮೃತ ದುರ್ದೈವಿ. ಮಹಿಳೆ 6 ತಿಂಗಳ ಹಿಂದಷ್ಟೇ ಸಿಆರ್ಪಿಎಫ್ ಪೇದೆ ರವೀಶ್ ಅವರನ್ನು ಮದುವೆಯಾಗಿದ್ದರು. ಗಂಡನ ಮನೆಯಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಂದೆ ತಾಯಿ ಆರೋಪಿಸಿದ್ದಾರೆ.
ಮದುವೆ ಸಂದರ್ಭದಲ್ಲಿ ಕೇಳಿದಷ್ಟು ವಡವೆ ನೀಡಿ, ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಇಷ್ಟಾದರೂ ಗೌರಮ್ಮನಿಗೆ ನಿರಂತರ ಕಿರುಕುಳ ನೀಡುತಿದ್ದರು. ಇದೀಗ ಮಹಿಳೆ ಸಾವಿಗೆ ಗಂಡನ ಮನೆಯವರ ಕಿರುಕುಳ ಕಾರಣ ಗೌರಮ್ಮನನ್ನು ಚೆನ್ನಾಗಿ ಥಳಿಸಿ ಸಾಯಿಸಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಘಟನೆ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯ ಮೃತದೇಹ ಇಟ್ಟು ಗೌರಮ್ಮನ ಗಂಡನ ಮನೆಯವರು ಪರಾರಿಯಾಗಿದ್ದಾರೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.