ಚಿತ್ರದುರ್ಗ: ಕಾಂಗ್ರೆಸ್ ನಾಯಕರಿಗೆ ಶಿರಾ ಹಾಗೂ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸೋಲಿನ ಹತಾಶೆ ಕಾಡುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡುತ್ತಾ, ಕೈ ಅಭ್ಯರ್ಥಿ ಕುಸುಮರವರ ಮೇಲೆ ಎಫ್ಐಆರ್ ಹಾಕಿ ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಅವರು ಸರ್ಕಾರ ನಡೆಸಿದ್ದ ಸಂದರ್ಭದಲ್ಲಿ ಈ ರೀತಿಯ ಲೋಪಗಳು ಆಗಿವೆ. ಈ ಎಫ್ಐಆರ್ ನಮ್ಮ ಸರ್ಕಾರ ಹಾಕಿಲ್ಲ. ಬದಲಾಗಿ ಚುನಾವಣಾ ಆಯೋಗ ಎಫ್ಐಆರ್ ಹಾಕಿದೆ ಎಂದು ಸಮರ್ಥಿಸಿಕೊಂಡರು.
ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲುವ ಭೀತಿಯಿಂದ ಡಿಕೆಶಿ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಒಬ್ಬ ಹೆಣ್ಣು ಮಗಳ ಮೇಲೆ ಎಫ್ ಐಆರ್ ಹಾಕಿಸಿದವರು ಗಂಡಸರೇ ಎಂಬ ಡಿಕೆಶಿ ಹೇಳಿಕೆ ಕೆಂಡಾಮಂಡಲರಾದ ಶ್ರೀರಾಮುಲು, ಇದೆಲ್ಲಾ ವರ್ಕೌಟ್ ಆಗಲ್ಲ. ಚುನಾವಣೆ ವೇಳೆ ಹೀಗೆ ಮಾತನಾಡುವುದು ಕಾಂಗ್ರೆಸ್ಸಿನವರ ಸಂಪ್ರದಾಯವಾಗಿದೆ. ಅವರು ಸಿಂಪತಿ ಗಿಟ್ಟಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆಂದು ಡಿಕೆಶಿ ವಿರುದ್ಧ ಗುಡುಗಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ತುಳಸಿ ಸಭಾಂಗಣದಲ್ಲಿ ನಡೆದ ಆಗ್ನೇಯ ಪದವಿಧರ ಪ್ರಚಾರ ಸಭೆಗೆ ಬಿಜೆಪಿ ಶಾಸಕಿ ಪೂರ್ಣಿಮಾ ಗೈರಾಗಿದ್ದರು. ವಿಧಾನ ಪರಿಷತ್ ಚುನವಣೆಯ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಪರ ಪ್ರಚಾರ ಸಭೆಗೆ ಸಚಿವ ಶ್ರೀರಾಮುಲು ಚಾಲನೆ ನೀಡಿದ್ರು. ಆದರೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರು ತಮ್ಮ ಪತಿ ಶ್ರೀನಿವಾಸ್ ಪರ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ವಿರುದ್ಧ ರೆಬೆಲ್ ಆಗಿ ಗುರುತಿಸಿಕೊಂಡಿದ್ದರು.
ಬಿಜೆಪಿ ವರಿಷ್ಠರು ಮೌನ ವಹಿಸಿದ್ದ ಹಿನ್ನೆಲೆಯಲ್ಲಿ ಇಂದು ಹಿರಿಯೂರು ಪಟ್ಟಣದಲ್ಲೇ ನಡೆದ ಬಿಜೆಪಿ ಪ್ರಚಾರ ಸಭೆಗೂ ಗೈರಾಗಿದ್ದಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಮನೆಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜಕಲ್ಯಾಣ ಸಚಿವ ಶ್ರೀರಾಮುಲು, ಶಾಸಕಿ ಪೂರ್ಣಿಮಾ ನಡೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಈ ವಿಚಾರವಾಗಿ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಕ್ರಿಯರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.