ಮೈಸೂರು: ರೈತರ ಪ್ರತಿಭಟನೆ ವೇಳೆ ಸಾವಿರಾರು ಟ್ರ್ಯಾಕ್ಟರ್ ಒಂದೇ ಬಾರಿ ರಸ್ತೆಗಿಳಿದರೆ ಬೆಂಗಳೂರಿನ ಟ್ರಾಫಿಕ್ ಕಥೆ ಏನಾಗುತ್ತೆ ಎಂದು ಸಚಿವ ಎಸ್ಟಿ ಸೋಮ್ ಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಪ್ರತಿಭಟನೆಗೆ ನಮ್ಮ ವಿರೋಧ ಇಲ್ಲ. ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಬೆಂಗಳೂರಿನಲ್ಲಿ ಅಪಾರ ಪ್ರಮಾಣದ ಜನದಟ್ಟಣೆ ಇದೆ. ಏಕಕಾಲಕ್ಕೆ ಸಾವಿರಾರು ಟ್ರ್ಯಾಕ್ಟರ್ ರಸ್ತೆಗಿಳಿದರೆ ತೊಂದರೆ ಆಗುತ್ತೆ ಎಂದು ಹೇಳಿದ್ದಾರೆ.
ಸಾಂಕೇತಿಕವಾಗಿ 50 ಟ್ರಾಕ್ಟರ್ ತಂದು ಮೆರವಣಿಗೆ ಮಾಡಿದರೆ ನಮ್ಮ ಅಭ್ಯಂತರ ಇಲ್ಲ. ರ್ಯಾಲಿಗೆ ಅನುಮತಿ ಇಲ್ಲ ಅಂತ ಈಗಾಗಲೇ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿದ್ದಾರೆ. ದೆಹಲಿಯ ಸರ್ಕಾರ ರ್ಯಾಲಿಗೆ ಅನುಮತಿ ನೀಡಿರಬಹುದು. ಆದರೆ ಅಲ್ಲಿನ ರಸ್ತೆಗಳೇ ಬೇರೆ ಬೆಂಗಳೂರಿನ ರಸ್ತೆಗಳೇ ಬೇರೆ ಇದೆ. ಹಾಗಾಗಿ ಬೆಂಗಳೂರಿನಲ್ಲಿ ದೊಡ್ಡ ಪ್ರತಿಭಟನೆ ನಡೆದರೆ ಕರ್ನಾಟಕವೇ ಸ್ತಬ್ಧವಾಗುವಂತಾಗುತ್ತದೆ. ರೈತರು ಸಹ ನೋಡಿಕೊಂಡು ಪ್ರತಿಭಟನೆ ಮಾಡಲಿ ಎಂದು ಮನವಿ ಮಾಡಿದ್ದಾರೆ.