– ವಾಟ್ಸಪ್ ಗ್ರೂಪ್ ರಚಿಸಿ ಕಿರುಕುಳ
– ತಂದೆಯ ಸಹಾಯಕ್ಕಾಗಿ ಆಟೋ ಓಡಿಸ್ತಿದ್ದ ಯೋಗೇಶ್
ಮುಂಬೈ: ತಂದೆಗೆ ಸಹಾಯ ಮಾಡಲು ಆಟೋರಿಕ್ಷಾ ಓಡಿಸಲು ಪ್ರಾರಂಭಿಸಿದ ಯುವಕ, ಸಾಲಗಾರರ ನಿರಂತರ ಕಿರುಕುಳ ಮತ್ತು ಅವಮಾನದಿಂದ ಮನನೊಂದು ಐರೋಲಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಯೋಗೇಶ್ ಮಾನೆ(22) ಎಂದು ಗುರುತಿಸಲಾಗಿದೆ. ಮುಲುಂಡ್ ವೆಸ್ಟ್ ನ ರೋಹಿದಾಸ್ ನಗರದ ನಿವಾಸಿ. ಈತ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದನು.
ಇತ್ತೀಚೆಗೆ ಕೈಗಾರಿಕಾ ತಾಂತ್ರಿಕ ಅಧ್ಯಯನವನ್ನು ಯೋಗೇಶ್ ಮಾನೆ ಪೂರ್ಣಗೊಳಿಸಿದ್ದನು. ಆದರೆ ಅವನಿಗೆ ಕೆಲಸ ಸಿಕ್ಕಿರಲಿಲ್ಲ. ಹಾಗಾಗಿ ಆಟೋ ಓಡಿಸುತ್ತಾ ತಂದೆಗೆ ಸಹಾಯ ಮಾಡಲು ನಿರ್ಧರಿಸಿದ್ದನು. ತಂದೆ ಆನಂದ್ ಮಾನೆ ಅವರು ನವೆಂಬರ್ನಲ್ಲಿ ಅವನಿಗಾಗಿ ಆಟೋ ಖರೀದಿಸಿ ವಾಹನದ ನೋಂದಣಿ ಇತ್ಯಾದಿಗಳಿಗೆ ಹಣವನ್ನು ನಿರ್ವಹಿಸುವಂತೆ ಹೇಳಿದ್ದರು.
ಆಟೋ ಕೆಲವು ಡಾಕ್ಯುಮೆಂಟ್ಗಳಿಗಾಗಿ ಸುಮಾರು 47,000 ರೂಗಳನ್ನು ಸಾಲ ಮಾಡಿದ್ದನು. ಆದರೆ ಆ ಹಣವನ್ನು ಮರುಪಾವತಿಸಲು ಹೆಣಗಾಡುತ್ತಿದ್ದನು. ಸಾಲ ಕೊಟ್ಟಿರುವವರು ಅವನಿಗೆ ಕರೆ ಮಾಡಿ ಹಣವನ್ನು ಕೊಡುವಂತೆ ಹೇಳಿದ್ದರು ಮತ್ತು ಅವನ ಸ್ನೇಹಿತರು ಮತ್ತು ರಕ್ತಸಂಬಂಧಿಗಳು ಇರುವ ವಾಟ್ಸಪ್ ಗುಂಪನ್ನು ಸಹ ರಚಿಸಿ ಹಣವನ್ನು ಮರಳಿಸುವಂತೆ ಸಂದೇಶವನ್ನು ಕಳಿಸಿದ್ದರು. ಈ ವಿಚಾರವಾಗಿ ಮನನೊಂದ ಯುವಕ ಒಂದು ದಿನ ಮನೆಯಿಂದ ಹೊರಗೆ ಹೋದವನು ಮರಳಿ ಬರಲಿಲ್ಲ. ಯೋಗೇಶ್ ಮಾನೆ ಫೋನ್ ಸ್ವಿಚ್ ಆಗಿದೆ, ಆವನು ನಾಪತ್ತೆಯಾಗಿದ್ದನು. ಈ ಬಗ್ಗೆ ಅನುಮಾನಗೊಂಡಿರುವ ಕುಟುಂಬಸ್ಥರು ಮುಲುಂಡ್ ಪೊಲೀಸರಿಗೆ ದೂರು ನೀಡಿದ್ದರು. ಡಿಸೆಂಬರ್ 22 ರಂದು ಥಾಣೆ ಕ್ರೀಕ್ನಲ್ಲಿ ಯೋಗೇಶ್ ಮಾನೆ ಅವರ ಶವ ಪತ್ತೆಯಾಗಿದೆ ಎಂದು ಕುಟುಂಬಸ್ಥರಿಗೆ ಪೊಲೀಸರು ತಿಳಿಸಿದರು.
ಯೋಗೇಶ್ ಮಾನೆ ಸಾವಿನ ನಂತರ ಫೋನ್ ಅನ್ನು ಪರಿಶೀಲನೆ ಮಾಡಿದ್ದಾರೆ. ಆಗ ಆರು ಹಣ-ಸಾಲ ನೀಡುವ ಅಪ್ಲಿಕೇಶನ್ಗಳು ಫೋನ್ನಲ್ಲಿ ಇದ್ದವು ಮತು ಸಾಲಕೊಟ್ಟಿರುವವರು ಅವನಿಗೆ ಕರೆ, ಸಂದೇಶ ಕಳುಹಿಸಿದ್ದರು. ಡಿಫೌಲ್ಟರ್ ಯೋಗೇಶ್ ಆನಂದ್ ಎಂಬ ಹೆಸರಿನ ಒಂದು ವಾಟ್ಸಪ್ ಗ್ರೂಪ್ ಅನ್ನು ರಚಿಸಿ ಕೆಲವು ಸ್ನೇಹಿತರು ಮತ್ತು ರಕ್ತಸಂಬಂಧಿಗಳನ್ನು ಸೇರಿಸಿ ಯೋಗೇಶ್ ಸಾಲ ಪಡೆದಿರುವ ವಿಷಯವನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ್ದರು.
ವಾಟ್ಸಪ್ ಗ್ರೂಪ್ ಅನ್ನು ರಚಿಸದಂತೆ ಯೋಗೇಶ್ ಕೇಳಿಕೊಂಡಿದ್ದನು. ಆದರೆ ಅವರು ಅವನ ಮನವಿಗೆ ಸ್ಪಂದಿಸಲಿಲ್ಲ. ಇದರಿಂದ ಯೋಗೇಶ್ ಮನನೊಂದಿದ್ದನು ಎಂದು ಮೃತ ಯೋಗೇಶ್ ಸಹೋದರಿ ಹೇಳಿದ್ದಾಳೆ.