– ಕೊರೊನಾ ತಡೆಯಲು ಮುಂದಾದ ಶಾಸಕ ಬಾಲಕೃಷ್ಣ
ಹಾಸನ: ಜಿಲ್ಲೆಯಲ್ಲಿ ಕೋವಿಡ್ ಎಂಬ ಹೆಮ್ಮಾರಿ ಕೈ ಮೀರಿ ಹೋಗುತ್ತಿದೆ. ಅದೆಷ್ಟೋ ಅಧಿಕಾರಿಗಳು ಇದನ್ನು ಹತೋಟಿಗೆ ತರಲು ಶ್ರಮಿಸಿದರೂ ಪ್ರಯೋಜನವಾಗಿಲ್ಲ.
ಈಗಾಗಲೇ ಹಾಸನ ಜಿಲ್ಲೆಯಲ್ಲಿ ಕೊರೊನಾ ಸಮೂದಾಯಕ್ಕೆ ಹಬ್ಬಿರುವ ಸೂಚನೆ ಸಿಕ್ಕಿದೆ. ಇದಕ್ಕೆ ಮದ್ದು ಅಂದರೆ ಜನರು ಸಾರ್ವಜನಿಕ ಸ್ಥಳದಲ್ಲಿ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಹೀಗೆ ಮಾಡಿದರೆ ಮಾತ್ರ ಒಂದಿಷ್ಟು ಕೊರೊನಾ ಸೋಂಕು ಕಡಿಮೆ ಮಾಡಬಹುದು.
ಇದನ್ನು ಗಮನದಲ್ಲಿಟ್ಟುಕೊಂಡು ಚನ್ನರಾಯಪಟ್ಟಣದ ಶ್ರವಣಬೆಳಗೂಳ ಕ್ಷೇತ್ರದ ಶಾಸಕ ಬಾಲಕೃಷ್ಣ ಮತ್ತು ಅವರ ಅಭಿಮಾನಿಗಳು ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಮಾರುಕಟ್ಟೆಯಂತಹ ಜನಜಂಗುಳಿ ಇರುವ ಪ್ರದೇಶದಲ್ಲಿ ಸ್ಯಾನಿಟೈಸರ್ ಹಾಗೂ ಸೆನ್ಸರ್ ಸ್ಯಾನಿಟೈಸರ್ ಅಳವಡಿಸುವ ಮೂಲಕ ಕೊರೊನಾ ಸೋಂಕು ತೊಲಗಿಸಲು ಪಣತೊಟ್ಟಿದ್ದಾರೆ. ಬಾಲಣ್ಣ ಬ್ರಿಗೇಡ್ ಎಂಬ ಸಂಘದ ವತಿಯಿಂದ ಈ ಕಾರ್ಯ ಮಾಡಲಾಗಿದೆ.
ಇದೇ ವೇಳೆ ಬಾಲಣ್ಣ ಬ್ರಿಗೇಡ್ ಸಂಘದ ಅಧ್ಯಕ್ಷ ರಾಚೇನಹಳ್ಳಿ ರಿತೇಶ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮೈಮೀರಿ ಹೋಗುತ್ತಿದೆ. ಹೀಗಾಗಿ ನಾವು ಹೆಚ್ಚು ಸಾರ್ವಜನಿಕರು ಓಡಾಡುವ ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಮಾರುಕಟ್ಟೆಗಳಲ್ಲಿ ಸೆನ್ಸರ್ ಸ್ಯಾನಿಟೈಸರ್ ಗಳನ್ನು ಅಳವಡಿಸಿದ್ದೇವೆ. ಈ ಸ್ಯಾನಿಟೈಸರ್ 8 ಲೀಟರ್ ಹಿಡಿಯಲಿದ್ದು, ಸುಮಾರು 2,000 ಜನ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೊದಲು ಕೊರೊನಾ ಶುರುವಾಗಿದ್ದೆ ಚನ್ನರಾಯಪಟ್ಟಣ ತಾಲೂಕಿನಲ್ಲಿ, ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಾಗ ಎಲ್ಲರಿಗೂ ಆತಂಕ ಮನೆ ಮಾಡಿತ್ತು. ಆದರೆ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣ ಅವರು ಸೋಂಕನ್ನು ತಡೆಗಟ್ಟುವ ಕೆಲಸಕ್ಕೆ ಮುಂದಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಅವರ ಅಭಿಮಾನಿಗಳ ಸಂಘ ಕೂಡ ಸೋಂಕು ತಡೆಗೆ ಹೋರಾಡುತ್ತಿದೆ. ಇದೇ ವೇಳೆ ಸಂಘದ ಸದಸ್ಯರಾದ ಲೊಕೇಶ್, ಸಾಗರ್, ಹರ್ಷ, ರಂಜಿತ್, ಪವನ್, ಪ್ರವೀಣ್, ಸಂದೀಪ್, ಸಂಜು ಮತ್ತು ಅಭಿ ಮತ್ತಿತರು ಉಪಸ್ಥಿತರಿದ್ದರು.