ಚಾಮರಾಜನಗರ: ಅಮಾವಾಸ್ಯೆ ಪೂಜೆಗೆ ಹೆಚ್ಚಿನ ಜನ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ನಿನ್ನೆ ಮತ್ತು ಇಂದು ಮಲೆ ಮಹದೇಶ್ವರಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ.
ಆದರೆ ಸರ್ಕಾರಿ ಕೆಲಸಕ್ಕೆ ತೆರಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹೊರತು ಪಡಿಸಿ ಎಂದು ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ನಿನ್ನೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮಹದೇಶ್ವರಬೆಟ್ಟಕ್ಜೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಚಿವರು ಕುಟುಂಬ ಸಮೇತ ಹುಲಿವಾಹನ ಸೇವೆ ಸಲ್ಲಿಸಿದರು. ಸಚಿವರಿಗೋಸ್ಕರ ಹುಲಿ ವಾಹನ ಉತ್ಸವಕ್ಕೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿತ್ತು.
ಕೃಷಿ ಸಚಿವರಿಗೆ ಮಹದೇಶ್ವರ ಬೆಟ್ಟದಲ್ಲಿ ಯಾವ ಸರ್ಕಾರಿ ಕೆಲಸವು ಇರಲಿಲ್ಲ. ಆದರೆ ಸರ್ಕಾರಿ ಕೆಲಸ ನೆಪದಲ್ಲಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಮಾವಾಸ್ಯೆ ಪೂಜೆಗಾಗಿಯೇ ಸಚಿವ ಬಿ.ಸಿ. ಪಾಟೀಲ್ ಬಂದು ನಿನ್ನೆ ರಾತ್ರಿ ಬೆಟ್ಟದಲ್ಲೇ ವಾಸ್ತವ್ಯ ಹೂಡಿದ್ದರು. ಸಚಿವರೊಡನೆ ಹಲವು ಹಿಂಬಾಲಕರು ಬಂದಿದ್ದರು. ಹಾಗಾದರೆ ಸಚಿವರಿಗೊಂದು ಸಾರ್ವಜನಿಕರಿಗೊಂದು ಕಾನೂನೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಅಮಾವಾಸ್ಯೆ ಪೂಜೆಗಾಗಿ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕು ತೆರಳಲಿರುವ ಸಚಿವರು ನಂತರ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಸ್ಥಾನಕ್ಕೂ ಹೋಗಲಿದ್ದಾರೆ.