ಬೆಂಗಳೂರು: 6ನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಶಾಕ್ ಮೇಲೆ ಶಾಕ್ ಒಂದು ಎದುರಾಗಿದೆ. ಅದೇನಂದರೆ ವಜಾಗೊಂಡಿರೋ 338 ತರಬೇತಿ ನೌಕರರ ಕೆಲಸ ಯಾವುದೇ ಕಾರಣಕ್ಕೂ ವಾಪಸ್ ಬರಲ್ಲ ಎಂದು ಬಿಎಂಟಿಸಿ ಕಾನೂನು ಅಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.
ತರಬೇತಿ ನೌಕರರನ್ನ ವಜಾಗೊಳಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಎರಡು ವರ್ಷ ಬಿಎಂಟಿಸಿಯಲ್ಲಿ ತರಬೇತಿ ನೌಕರರು ಕೆಲಸ ಮಾಡಬೇಕು. ಅವರು ತೃಪ್ತಿಕರವಾಗಿ ಕೆಲಸ ಮಾಡಿದ ನಂತ್ರ ಅವರನ್ನ ಖಾಯಂ ಮಾಡಿಕೊಳ್ಳಲಾಗುತ್ತೆ. ನೌಕರರು ತರಬೇತಿ ನೌಕರರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಕೆಲವೊಂದು ನೌಕರರ ಮಾತು ಕೇಳಿ ತರಬೇತಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. Probationary ನೌಕರರು ಹಾಗೂ ತರಬೇತಿ ನೌಕರರು ಸಂಸ್ಥೆಗೆ ಖಾಯಂ ನೌಕರರಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ 338 ತರಬೇತಿ ನೌಕರರನ್ನ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಈಗ ವಜಾಗೊಂಡಿರುವ ತರಬೇತಿ ನೌಕರರು ಯಾವುದೇ ಕಾರಣಕ್ಕೂ ವಾಪಸ್ ಬಂದು ಕೆಲಸ ಮಾಡಲು ಸಾಧ್ಯವಿಲ್ಲ. ನಿಮಗೆ ಯಾರಾದ್ರೂ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಬಹುದು ಎಂದಿದ್ದರೆ ಅದು ನಿಮಗೆ ಬಂದಿರುವ ತಪ್ಪು ಸಂದೇಶವಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ನೌಕರರ ವಿರುದ್ಧವೂ ನಾವು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತೇವೆ. ಕಾರ್ಮಿಕ ಕಾನೂನು ಹಾಗೂ ನ್ಯಾಯಾಲಯಗಳಲ್ಲಿ ನೌಕರರು ಅರ್ಜಿ ಸಲ್ಲಿಸಬಹುದು. ನಾವು ಕೂಡ ಸಂಸ್ಥೆಯ ವತಿಯಿಂದ ಅರ್ಜಿ ಸಲ್ಲಿಸುತ್ತೇನೆ ಎಂದರು.
ಅಂತಿಮವಾಗಿ ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಒಳಪಡಬೇಕು. ನಿಮಗೆ ಅನುಕೂಲ ಮಾಡಿಕೊಡುತ್ತೇವೆ ಅಂತ ಹೇಳುವ ನಾಯಕರು ಇವರ ಹಿಂದೆ ಇರೋದಿಲ್ಲ. ನೌಕರರಿಗೆ ತೊಂದರೆಯಾದ್ರೆ ಅವರ ವೈಯಕ್ತಿಕ ವಿಚಾರಕ್ಕೆ, ಅವರೇ ನ್ಯಾಯಾಲಯದಲ್ಲಿ ಹೋರಾಡಬೇಕಾಗುತ್ತೆ ಎಂದು ಹೇಳಿದರು.
ನೌಕರರಿಗೆ ಎಸ್ಮಾ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಗತ್ಯ ಸೇವೆಗಳ ಕಾಯ್ದೆ ಅಡಿಯಲ್ಲ ಸಾರಿಗೆ ಸಂಸ್ಥೆ ಕೂಡ ಬರುತ್ತೆ. ಅಗತ್ಯ ಸೇವೆಯಲ್ಲಿರುವ ನೌಕರರು ಕೆಲಸಕ್ಕೆ ಬರಲು ನಿರಾಕರಿಸುವಾಗಿಲ್ಲ. ಆ ರೀತಿ ನಿರಾಕರಿಸಿದ್ರೆ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬಹುದು. ಜೊತೆಗೆ ನಿಗಮದ ವತಿಯಿಂದಲೂ ಬೇರೆ ಬೇರೆ ಕ್ರಮ ಜರುಗಿಸಬಹುದು. ನೌಕರರು ಈ ರೀತಿ ಕ್ರಮ ತೆಗೆದುಕೊಳ್ಳುವಂತೆ ಮಾಡದೇ ಕೆಲಸಕ್ಕೆ ಹಾಜರಾಗಿ ಎಂದು ವೆಂಕಟೇಶ್ ಸೂಚಿಸಿದರು.