ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಾರಿಗೆ ಇಲಾಖೆಗೆ 634 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ತಕ್ಷಣ ಎರಡು ತಿಂಗಳ ವೇತನ ಕೊಡಲು ಸಿಎಂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸವದಿ, ಸಾರಿಗೆ ಇಲಾಖೆ ಸಿಬ್ಬಂದಿಯ ಮೂರು ತಿಂಗಳ ವೇತನ ಸಮಸ್ಯೆ ಇದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ವೇತನ ಕೊಡಲು ಸಂಕಷ್ಟ ಎದುರಾಗಿದೆ. ಕೊರೊನಾದಿಂದ ಆರ್ಥಿಕ ಸಮಸ್ಯೆ ಇದೆ. ಇಂದು ಈ ಸಮಸ್ಯೆಯನ್ನು ಸಿಎಂಗೆ ಮನವರಿಕೆ ಮಾಡಿದೆವು ಎಂದ ಅವರು ಬಸ್ ಟಿಕೆಟ್ ದರ ಹೆಚ್ಚಳ ಸದ್ಯ ಏನೂ ಚರ್ಚೆ ಆಗಿಲ್ಲ. ಹೆಚ್ಚಳದ ಪ್ರಸ್ತಾಪ ಸದ್ಯ ನಮ್ಮ ಮುಂದೆ ಇಲ್ಲ ಅಂತ ತಿಳಿಸಿದರು.
ಅಕ್ಟೋಬರ್, ನವೆಂಬರ್, ಡಿಸೆಂಬರ್ ಸಂಬಳಕ್ಕೆ ಹಣದ ಕೊರತೆ ಇದೆ. 75:25 ಪ್ರಮಾಣದಂತೆ ಹಣಕಾಸು ನೆರವು ಕೇಳಿದ್ದೇವೆ. 634 ಕೋಟಿ ನೀಡಲು ಸಿಎಂ ಒಪ್ಪಿಗೆ ಕೊಟ್ಟಿದ್ದಾರೆ. ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಆರ್ಥಿಕ ನೆರವು ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ಕಾರಣ ನಿಗಮಗಳು ನಷ್ಟದಲ್ಲಿವೆ. ಹೀಗಾಗಿ ಸಂಬಳ ನೀಡಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ
ಇದೇ ವೇಳೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೂ ಒತ್ತಾಯ ಹಾಕಿದ್ದೇವೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಸಮುದಾಯ ಆಧಾರಿತವಾಗಿ ಮಾಡಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ನಾವು ನಮ್ಮ ಸಮುದಾಯದ ವಿಚಾರದಲ್ಲಿ ಸಿಎಂಗೆ ಒತ್ತಡ ಹಾಕಿದ್ದೇವೆ. ನಾನು, ಸೋಮಣ್ಣ ಹಾಗೂ ಬಿ.ಸಿ ಪಾಟೀಲ್ ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.
ಮರಾಠ ಸಮುದಾಯ ಹಿಂದುಳಿದಿದೆ. ಹಾಗಾಗಿ ನಿಗಮ ರಚಿಸಲಾಗಿದೆ. ಇದಕ್ಕೆ ನಮ್ಮ ಆಕ್ಷೇಪ ಇಲ್ಲ. ವೀರಶೈವ ಲಿಂಗಾಯತ ಸಮುದಾಯ ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿದೆ. ಹಾಗಾಗಿ ನಾವು ನಿಗಮ ಕೇಳಿದ್ದೇವೆ. ಕನ್ನಡ ಹೋರಾಟಗಾರರಿಗೆ ಮನವಿ ಮಾಡ್ತೇನೆ. ಮರಾಠಾ ನಿಗಮ ಭಾಷೆ ಆಧಾರದಲ್ಲಿ ಮಾಡಿಲ್ಲ. ಸಮುದಾಯ ಆಧಾರದಲ್ಲಿ ಮಾಡಿದ್ದಾರೆ. ಮರಾಠ ಸಮುದಾಯ ಬಹಳ ವರ್ಷಗಳಿಂದ ರಾಜ್ಯದಲ್ಲಿದ್ದಾರೆ, ಹಿಂದುಳಿದಿದ್ದಾರೆ ಎಂದು ಅವರು ಹೇಳಿದರು.