ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಸುಪ್ರಸಿದ್ಧ ಯಲಗೂರು ಆಂಜನೇಯ ದೇಗುಲದಲ್ಲಿ ಹುಂಡಿ ಹಣ ಎಣಿಕೆ ಮಾಡುತ್ತಿದ್ದ ವೇಳೆ ಹುಂಡಿಯಲ್ಲಿ ಹಣದ ಜೊತೆ ಭಕ್ತರು ಆಂಜನೇಯನಿಗೆ ಬರೆದ ಪತ್ರಗಳು ಲಭ್ಯವಾಗಿವೆ.
“ಸಾರಾಯಿ ಕುಡಿಯುತ್ತೇನೆ, ಇಸ್ಪೀಟು, ಜೂಜು ಆಡುತ್ತೇನೆ”. ಈ ದುಶ್ಚಟ ಬಿಡಿಸು ಎಂದು ಭಕ್ತನೊರ್ವ ಪತ್ರ ಬರೆದಿದ್ದಾನೆ. ಜೊತೆಗೆ ಇನ್ನೋರ್ವ ಭಕ್ತ ಬಾಳೇಶ ಎಂಬ ಯುವಕ ನನ್ನ ಶರ್ಟ್ ಮೇಲೆ ‘ಒಂದು ಸಿಂಹ’ ‘ಒಂದು ಸ್ಟಾರ್’ ಬರುವ ಹಾಗೇ (ಐಪಿಎಸ್) ಮಾಡಪ್ಪ ಎಂದು ಬೇಡಿಕೊಂಡಿದ್ದಾನೆ. ಒಂದು ವರ್ಷದಲ್ಲಿ ಸರ್ಕಾರಿ ನೌಕರಿ ಸಿಕ್ಕರೆ ಎರಡನೇ ಸಂಬಳ ನಿನಗೆ ಮೀಸಲು, ಅಲ್ಲದೆ ನಡೆದುಕೊಂಡು ಬಂದು ಹರಕೆ ತೀರುಸುತ್ತೇನೆ ಎಂದು ಪತ್ರ ಬರೆದಿದ್ದಾನೆ. ಇದೇ ರೀತಿ ಅನೇಕ ವಿಚಿತ್ರ ಪತ್ರಗಳು ಆಂಜನೇಯ ಕೃಪೆಗಾಗಿ ಹುಂಡಿಯಲ್ಲಿ ಸಿಕ್ಕಿವೆ.
ಹುಂಡಿಯಲ್ಲಿ ಹಾಕಿದ ಹಣ ಏಣಿಕೆ ನಡೆಸಿದ ಅಧಿಕಾರಿಗಳಿಗೆ ಈ ವರ್ಷ 25 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಕೊರೊನಾ, ಲಾಕ್ಡೌನ್ ಮಧ್ಯೆಯು ಒಳ್ಳೆಯ ದೇಣಿಗೆ ಸಂಗ್ರಹವಾಗಿದೆ. ಉಪವಿಭಾಗಾಧಿಕಾರಿ ಬಲರಾಮ್ ರಾಠೋಡ, ನಿಡಗುಂದಿ ತಹಶಿಲ್ದಾರ್ ಶಿವಲಿಂಗಪ್ರಭು ವಾಲಿ ಸಮ್ಮುಖದಲ್ಲಿ ಹುಂಡಿಯ ಹಣ ಏಣಿಕೆ ಕಾರ್ಯ ನಡೆಸಲಾಗಿದೆ.