ಗದಗ: ದಿನಸಿ ಕಿಟ್ ಪಡೆಯಲು ಕಾರ್ಮಿಕರು ಕೊರೊನಾ ನಿಯಮಗಳನ್ನು ಮರೆತು ಕಿಲೋಮೀಟರ್ ಗಟ್ಟಲೇ ಸಾಲಿನಲ್ಲಿ ನಿಂತಿರುವ ಸನ್ನಿವೇಶ ಗದಗದಲ್ಲಿ ಕಂಡು ಬಂದಿದೆ. ಇದನ್ನೂ ಓದಿ: ಬೆಂಗಳೂರಿನ ಮರಗಳ ಮಾರಣ ಹೋಮ ಸಿದ್ಧತೆಗೆ ರಮ್ಯಾ ವಿರೋಧ
ಕಳೆದ 2 ತಿಂಗಳಿಂದ ಗೃಹ ಬಂಧನಲ್ಲಿರುವ ಜನರು ಇಂದು ಅನ್ಲಾಕ್ ಆಗುತ್ತಿದ್ದಂತೆ ಹೊರಗೆ ಬಂದಿದ್ದಾರೆ. ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿದರು. ಈ ಕಿಟ್ ಪಡೆಯಲು ಬಂದ ಕಾರ್ಮಿಕರು ನಾಮುಂದೆ ತಾ ಮುಂದೆ ಅಂತ ಮುಗಿಬಿದ್ದಿದ್ದಾರೆ. ಇಲ್ಲಿ ಬಹುತೇಕರು ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರ ಸಂಪೂರ್ಣವಾಗಿ ಮಾಯವಾಗಿದೆ. ಬೆಳಿಗ್ಗೆಯಿಂದ ಕಾರ್ಮಿಕರು ದಿನಸಿ ಕಿಟ್ ಪಡೆಯಲು ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತಿದ್ದರು.
ಜಿಲ್ಲೆಯಲ್ಲಿ ಒಟ್ಟು 14,175 ನೋಂದಾಯಿತ ಕಾರ್ಮಿಕರ ಪೈಕಿ 2 ಸಾವಿರ ಕಾರ್ಮಿಕರಿಗೆ ಮಾತ್ರ ಕಿಟ್ ವಿತರಣೆ ಮಾಡಲಾಗುತ್ತಿದೆ. ಇಬ್ಬರು ಹೋಮ್ ಗಾರ್ಡ್, ಓರ್ವ ಪೊಲೀಸ್ ಸಿಬ್ಬಂದಿಯಿಂದ ಸಾವಿರಾರು ಜನರನ್ನು ನಿಯಂತ್ರಿಸಲು ಕಷ್ಟವಾಯಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಐದಾರು ಸಾವಿರ ಜನ ಕಾರ್ಮಿಕರು ಜಮಾವಣೆಗೊಂಡಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ, ಜಿಲ್ಲಾಡಳಿತ ವಿಫಲವಾಗಿದೆ.
ಜನ ಗುಂಪಾಗಿ ಸೇರಬಾರದು, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಎಂಬ ನಿಯಮಗಳು ಇದ್ದರು ಇಲ್ಲಿ ಆ ನಿಯಮ ಮಾಯವಾಗಿವೆ. ಜನರು ಎಚ್ಚೆತ್ತುಕೊಳ್ಳುತ್ತಿಲ್ಲ, ಆರೋಗ್ಯ, ಜೀವಕ್ಕಿಂತ ಮುಖ್ಯವಾದದ್ದು ಕಿಟ್ ಅಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಹಲವರು ಹೇಳಿದ್ದಾರೆ.